ಆಸ್ಕರ್ರಿಂದ 15 ವರ್ಷಗಳ ಸಂಬಳ ಬಾಕಿ: ಉಪವಾಸ ಸತ್ಯಾಗ್ರಹದ ಎಚ್ಚರಿಕೆ
ಉಡುಪಿ, ಮಾ.26: ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಅವರ ಮಣಿಪಾಲ ವರ್ಕ್ಶಾಪ್ ಹಾಗೂ ಮನೆಯ ಕಚೇರಿಯಲ್ಲಿ 1972ರಿಂದ 1987ರವರೆಗೆ ಸುಮಾರು 15 ವರ್ಷಗಳ ದುಡಿದ 6.07 ಲಕ್ಷ ರೂ. ಸಂಬಳ ಈವರೆಗೆ ನೀಡದೆ ಇರುವುದರಿಂದ ಎ.2ರಂದು ಬೆಂಗಳೂರಿನ ಪ್ರೀಡಂ ಪಾರ್ಕ್ ನಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಅಂಬಲಪಾಡಿ ಗೋಪಾಲ ಪೂಜಾರಿ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಂಬಂಧ 1995ರಲ್ಲಿ ಸೋನಿಯಾ ಗಾಂಧಿಯವರಿಗೆ ದೂರು ನೀಡಿದ್ದೆ. ಅದಕ್ಕೆ ಸ್ಪಂದಿಸಿದ್ದ ಸೋನಿಯಾ ಗಾಂಧಿ, ಬಾಕಿ ಸಂಬಳ ನೀಡುವಂತೆ ಮತ್ತು ಮುಂದೆ ನನ್ನ ಜೀವನಕ್ಕೆ ದಾರಿ ಮಾಡಿಕೊಂಡುವಂತೆ ಆಸ್ಕರ್ಗೆ ಸೂಚಿಸಿದ್ದರು. ಅದಕ್ಕೆ ಒಪ್ಪಿಕೊಂಡ ಆಸ್ಕರ್ 10 ಸಾವಿರ ರೂ. ನೀಡಿರುವುದು ಬಿಟ್ಟರೆ ಏನೂ ನೀಡಿಲ್ಲ ಎಂದು ದೂರಿದರು.
ನನ್ನ ಮಗಳ ಮದುವೆ ಸಂದರ್ಭದಲ್ಲೂ ಆಸ್ಕರ್ ಸಹಾಯ ಮಾಡದೆ ಇದ್ದುದರಿಂದ ಇನ್ನು ತಾಳ್ಮೆಯಲ್ಲಿ ಇದ್ದರೆ ಸಂಬಳ ಸಿಗುವುದಿಲ್ಲ ಎಂದು ಭಾವಿಸಿ ಉಪವಾಸ ಸತ್ಯಾಗ್ರಹದ ನಿರ್ಧಾರ ಮಾಡಿದ್ದೇನೆ. ನಂತರವೂ ಹಣ ನೀಡದಿದ್ದರೆ ನಾನೂ ಪ್ರಾಣ ಬಿಡುತ್ತೇನೆ ಎಂದು ಅವರು ಎಚ್ಚರಿಕೆ ನೀಡಿದರು.
ಕಾರ್ಮಿಕ ಅಧಿಕಾರಿ ನೀಡಿದ ಹಿಂಬರಹದ ಪ್ರತಿ, ಸಂಬಳದ ಪಟ್ಟಿಯೊಂದಿಗೆ 15 ದಿನಗಳ ಹಿಂದೆ ಆಸ್ಕರ್ಗೆ ಪತ್ರ ಬರೆದಿದ್ದೇನೆ. ಅದರ ಯಥಾ ಪ್ರತಿಯನ್ನು ಮುಖ್ಯಮಂತ್ರಿ, ಉಸ್ತುವಾರಿ ಸಚಿವ, ಕೆಪಿಸಿಸಿ ಅಧ್ಯಕ್ಷರಿಗೆ, ಜಿಲ್ಲಾಧಿಕಾರಿಗೂ ಕಳುಹಿಸಿದ್ದೇನೆ. ಆದರೆ ಇದಕ್ಕೆ ಆಸ್ಕರ್ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಗೋಪಾಲ ಪೂಜಾರಿಯ ಪತ್ನಿ ಚಂಚಲ ಹಾಜರಿದ್ದರು.