ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ: ಸ್ಪಷ್ಟನೆ
ಹಿಂದೂ ಜನಜಾಗೃತಿ ಸಮಿತಿ- ಸನಾತನ ಸಂಸ್ಥೆ
ಮಂಗಳೂರು, ಎ.21: ಹಿಂದೂ ಜನಜಾಗೃತಿ ಸಮಿತಿ ಇದು ಸಮಾಜ ಸಹಾಯ, ರಾಷ್ಟ್ರರಕ್ಷಣೆ ಮತ್ತು ಧರ್ಮಜಾಗೃತಿಗಾಗಿ ಕಾರ್ಯ ಮಾಡುವ ರಾಜಕೀಯೇತರ ಸ್ವಯಂಸೇವಾ ಸಂಘಟನೆಯಾಗಿದೆ. ಹಾಗಾಗಿ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹಿಂದೂ ಜನಾಗೃತಿ ಸಮಿತಿ ಪ್ರಕಟನೆಯಲ್ಲಿ ತಿಳಿಸಿದೆ.
ಸಮಿತಿಯು ಕಳೆದ 16 ವರ್ಷಗಳಿಂದ ಧರ್ಮ ಶಿಕ್ಷಣ, ಧರ್ಮ ಜಾಗೃತಿ ಮತ್ತು ಧರ್ಮ ರಕ್ಷಣೆಯ ಉಪಕ್ರಮಗಳ ಮಾಧ್ಯಮದಿಂದ ರಾಷ್ಟ್ರವ್ಯಾಪಿ ಹಿಂದೂ ಸಂಘಟನೆಯ ಕಾರ್ಯ ಮಾಡುತ್ತಿದೆ. ಹಿಂದೂಗಳ ಸಾಮಾಜಿಕ, ರಾಷ್ಟ್ರೀಯ ಮತುತಿ ಧಾರ್ಮಿಕ ಸಮಸ್ಯೆಗಳ ಪರಿಹಾರಕ್ಕಾಗಿ ಹಿಂದೂ ರಾಷ್ಟ್ರ ಸ್ಥಾಪನೆ ಮಾಡುವುದು, ಇದೊಂದೇ ಧ್ಯೇಯವನ್ನಿಟ್ಟುಕೊಂಡು ಸಮಿತಿಯು ಸಮಸ್ತ ಹಿಂದೂಗಳನ್ನು ಜಾಗೃತ ಮತ್ತು ಸಂಘಟಿತಗೊಳಿಸುವ ಕಾರ್ಯ ಮಾಡುತ್ತಿದೆ.
ಕೆಲ ಪತ್ರಿಕೆಗಳಲ್ಲಿ ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿ ಚುನಾವಣೆ ಸ್ಪರ್ಧಿಸಲಿದೆ ಎಂಬ ಸುದ್ದಿ ಪ್ರಕಟವಾಗಿದೆ. ಆದರೆ ಅದರಲ್ಲಿ ಹಿಂದೂ ಜನಜಾಗೃತಿ ಸಮಿತಿ ಹಾಗೂ ಸನಾತನ ಸಂಸ್ಥೆಯ ಹೆಸರನ್ನು ಹೇಗೆ ಉಲ್ಲೇಖಿಸಲಾಯಿತು ಇದರ ಬಗ್ಗೆ ನಮಗೆ ಯಾವುದೇ ಕಲ್ಪನೆ ಇಲ್ಲ. ಈ ರೀತಿ ರಾಜಕೀಯ ಕಾರ್ಯ ಮಾಡುವುದು ನಮ್ಮ ತತ್ವಕ್ಕೆ ಹೊಂದಾಣಿಕೆಯಾಗುವುದಿಲ್ಲ. ಆದುದರಿಂದ ನಾವು ಯಾವುದೇ ಚುನಾವಣೆಯಲ್ಲಿ ಸ್ಪರ್ಧೆಗಿಳಿಯುವ ಅಥವಾ ರಾಜಕೀಯ ಪಕ್ಷ ಸ್ಥಾಪಿಸುವ ನಿರ್ಧಾರ ಮಾಡಿಲ್ಲ. ಈ ಬಗ್ಗೆ ನಾವು ಚುನಾವಣಾ ಆಯೋಗಕ್ಕೂ ಲಿಖಿತ ನಿವೇದನೆ ನೀಡಲಿದ್ದೇವೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.