ಉಡುಪಿ: ಆಸ್ಕರ್, ಪ್ರಮೋದ್, ಸೊರಕೆ ಸಹಿತ ಗಣ್ಯರಿಂದ ಮತದಾನ
ಉಡುಪಿ, ಮೇ 12: ಮಾಜಿ ಸಚಿವ ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆ ಕುಟುಂಬ ಸಹಿತವಾಗಿ ಮತದಾನ ಮಾಡಿದರು.
ಉಡುಪಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ವಿನಯ್ ಕುಮಾರ್ ಸೊರಕೆ ಪತ್ನಿ ದಕ್ಷ ವಿ ಸೊರಕೆ, ಪುತ್ರ ದ್ವಿಶನ್ ವಿ ಸೊರಕೆ, ಪುತ್ರಿ ದ್ವಿತಿ ಸೊರಕೆ ಮತದಾನ ಚಲಾಯಿಸಿದ್ದಾರೆ.
ಮುಂಜಾನೆ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿದ ಅವರು ಕುಟುಂಬ ಸಹಿತ ಬಂದು ಸರತಿ ಸಾಲಿನಲ್ಲಿ ನಿಂತು ಮತ ಚಲಾವಣೆ ಮಾಡಿದರು. ಈ ಸಂದರ್ಭ ಮಾತನಾಡಿದ ಅವರು, ಕಾಪು ಕ್ಷೇತ್ರದಲ್ಲಿ ಯುವಕರು ಸಹಿತ ಸರ್ವಧರ್ಮದವರು ನನ್ನ ಅಭಿವೃದ್ಧಿ ಕೆಲಸವನ್ನು ಮೆಚ್ಚಿಕೊಂಡಿದ್ದಾರೆ. ಅಭಿವೃದ್ಧಿಯ ಪರ ಮತ ಚಲಾಯಿಸಿ ನನ್ನನ್ನು ಗೆಲ್ಲಿಸಲಿದ್ದಾರೆ ಎಂಬ ನಂಬಿಕೆ ಇದೆ ಎಂದು ಹೇಳಿದರು.
ಕಾರ್ಕಳ ವಿಧಾನಸಭಾ ಕ್ಷೇತ್ರದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಮಾಜಿ ಶಾಸಕರಾದ ಹೆಚ್ . ಗೋಪಾಲ್ ಭಂಡಾರಿಯವರು ತಮ್ಮ ಮತವನ್ನು ಹೆಬ್ರಿಯ ಚಾರ ಗ್ರಾಮದಲ್ಲಿರುವ ಗಾಂಧಿನಗರ ಮತಗಟ್ಟೆಯಲ್ಲಿ ಚಲಾಯಿಸಿದರು, ಪತ್ನಿ ಶ್ರೀಮತಿ ಪ್ರಕಾಶಿನಿ ಗೋಪಾಲ್ ಭಂಡಾರಿ ಅವರೂ ಜೊತೆಗಿದ್ದು ತಮ್ಮ ಮತ ಚಲಾಯಿಸಿದರು.
ಉಡುಪಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಅವರು ಮಲ್ಪೆ ಶ್ರೀ ನಾರಾಯಣ ಗುರು ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ತನ್ನ ತಾಯಿ ಮನೋರಮಾ ಮಧ್ವರಾಜ್ ಅವರೊಂದಿಗೆ ಮತವನ್ನು ಚಲಾಯಿಸಿದರು.
ಆಸ್ಕರ್ ಫೆರ್ನಾಂಡಿಸ್ ಅವರು ಅಜ್ಜರಕಾಡು ಸರಕಾರಿ ಶಾಲೆಯಲ್ಲಿ ಮತದಾನ ಮಾಡಿದರು. ಅವರೊಂದಿಗೆ ಅವರ ಪತ್ನಿ ಬ್ಲೊಸಮ್ ಫೆರ್ನಾಂಡಿಸ್ ಇದ್ದರು.