ಜಾನುವಾರು ವ್ಯಾಪಾರಿಗಳ ಕೊಲೆ, ವಿದ್ಯಾರ್ಥಿಗಳ ಮೇಲಿನ ಹಲ್ಲೆ : ಸಿಎಫ್ಐನಿಂದ ಧರಣಿ
ಬಂಟ್ವಾಳ: ದೇಶದಲ್ಲಿ ಅಷಹಿಂಷ್ಣುತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದರೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮೌನವಾಗಿರುವ ಮೂಲಕ ಪ್ರಜಾಪ್ರಭುತ್ವದ ಅದಃಪತನಕ್ಕೆ ಮುನ್ನುಡಿ ಬರೆದಿದ್ದಾರೆ ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ಬಂಟ್ವಾಳ ತಾಲೂಕು ಅಧ್ಯಕ್ಷ ಅಶ್ವನ್ ಸಾಧಿಕ್ ಆರೋಪಿಸಿದರು.
ಜಾರ್ಖಾಂಡ್ ರಾಜ್ಯದಲ್ಲಿ ಜಾನುವಾರು ವ್ಯಾಪಾರಿಗಳಿಬ್ಬರನ್ನು ಕೊಂದು ಬಳಿಕ ಮರಕ್ಕೆ ನೇತು ಹಾಕಿದ ಪ್ರಕರಣವನ್ನು ಖಂಡಿಸಿ ಹಾಗೂ ಘಟನೆಯ ವಿರುದ್ಧ ದಿಲ್ಲಿಯ ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಹಲ್ಲೆ ನಡೆಸಿದ ರಾಷ್ಟ್ರೀಯ ಜಾಗೃತ್ ಮಂಚ್ ಕಾರ್ಯಕರ್ತರ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಸಿಎಫ್ಐ ಬಂಟ್ವಾಳ ತಾಲೂಕು ಸಮಿತಿ ಬಿ.ಸಿ.ರೋಡ್ ತಾಲೂಕು ಕಚೇರಿ ಮುಂಭಾಗದಲ್ಲಿ ಗುರುವಾರ ಸಂಜೆ ನಡೆಸಿದ ಪ್ರತಿಭಟನೆಂುಲ್ಲಿ ಅವರು ಮಾತನಾಡಿದರು.
ಕೇಂದ್ರದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ದೇಶದಲ್ಲಿ ದಲಿತರ, ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ಅಲ್ಲದೆ, ಸಂಘಪರಿವಾರ ಹಾಗೂ ಬಿಜೆಪಿ ಎಬಿವಿಪಿಯನ್ನು ಬಳಸಿಕೊಂಡಿ ಕಾಲೇಜುಗಳಲ್ಲಿ ಪ್ರಜಾಪ್ರಭುತ್ವದ ಪರ ಮಾತನಾಡುವ ವಿದ್ಯಾರ್ಥಿಗಳ ಮೇಲೆ ದೇಶ ದ್ರೋಹದ ಆರೋಪಗಳನ್ನು ಹೊರಿಸಿ ದೌರ್ಜನ್ಯ ಎಸಗುತ್ತಿದೆ. ಆ ಮೂಲಕ ವಿದ್ಯಾರ್ಥಿ ಚಳವಳಿಯನ್ನು ಮಟ್ಟ ಹಾಕಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿರು.
ಜಾರ್ಖಾಂಡ್ನಲ್ಲಿ ಜಾನುವಾರು ವ್ಯಾವಾರಿಗಳನ್ನು ಕೊಂದು ಮರಕ್ಕೆ ತೂಗು ಹಾಕಿದ ಹಾಗೂ ಪ್ರಕರಣವನ್ನು ಖಂಡಿಸಿ ದಿಲ್ಲಿಯಲ್ಲಿ ಪ್ರತಿಭಟಿಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ತೀವ್ರ ತರಹದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ತಾಲೂಕು ಉಪಾಧ್ಯಕ್ಷ ಮುಹಮ್ಮದ್ ಇಮ್ರಾನ್, ತಾಲೂಕು ಸಮಿತಿ ಸದಸ್ಯರಾದ ಖಾದರ್, ಫಹದ್ ಮೊದಲಾದವರು ಉಪಸ್ಥಿತರಿದ್ದರು. ಪ್ರತಿಭಟನಾ ಸಭೆಯಲ್ಲಿ ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯವನ್ನು ಖಂಡಿಸಿ ಘೋಷಣೆಗಳನ್ನು ಕೂಗಲಾಯಿತು.