ವಾಮಂಜೂರು: ತಂಡದಿಂದ ವ್ಯಕ್ತಿಗೆ ಹಲ್ಲೆ; ಆರೋಪ
ಮಂಗಳೂರು, ಜೂ.24: ವಾಮಂಜೂರಿನಲ್ಲಿ ಮೂರು ಬೈಕ್ಗಳಲ್ಲಿ ಬಂದ ದುಷ್ಕರ್ಮಿಗಳ ತಂಡವೊಂದು ವ್ಯಕ್ತಿಯೋರ್ವನ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾದ ಘಟನೆ ರವಿವಾರ ನಡೆದಿದೆ.
30 ವರ್ಷಗಳಿಂದ ಗುಜಿರಿ ಅಂಗಡಿ ನಡೆಸುತ್ತಿರುವ ವಾಮಂಜೂರು ನಿವಾಸಿ ಖಾಲೀದ್ ಉಳಾಯಿಬೆಟ್ಟು (52) ಹಲ್ಲೆಗೊಳಗಾದವರು ಎಂದು ಗುರುತಿಸಲಾಗಿದೆ.
ಖಾಲೀದ್ ಇಂದು ಸಂಜೆ 5:30ರ ಸುಮಾರಿಗೆ ತನ್ನ ಗುಜಿರಿ ಅಂಗಡಿಗೆ ಬೀಗ ಹಾಕಿ ಕಾರಿನಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ಮೂರು ಬೈಕ್ಗಳಲ್ಲಿ ಬಂದ ಆರು ಮಂದಿಯ ತಂಡ ಖಾಲೀದ್ ಮೇಲೆ ಹಲ್ಲೆ ನಡೆಸಿತು ಎಂದು ದೂರಲಾಗಿದೆ.
‘‘ತನ್ನನ್ನು ನೋಡಲು ಜೈಲಿಗೆ ಯಾಕೆ ಬರಲಿಲ್ಲ. ಹಫ್ತಾ ಯಾಕೆ ಕಟ್ಟುತ್ತಿಲ್ಲ ಎಂದು ವಾಮಂಜೂರಿನ ರಾಯ್ಫಿ ಹನೀಫ್ (20) ಎಂಬಾತ ಪ್ರಶ್ನಿಸಿದ್ದು, ನಾನೇಕೆ ಹಫ್ತಾ ಕಟ್ಟಬೇಕೆಂದು ಕೇಳಿದ್ದು, ಈ ಸಂದರ್ಭ ದುಷ್ಕರ್ಮಿಗಳು ಕುತ್ತಿಗೆ ತಲವಾರು ಹಿಡಿದು, ಹಲ್ಲೆ ನಡೆಸಿ, ಬಾಟಲ್ನಿಂದ ತಲೆಗೆ ಹೊಡೆದಿದ್ದಾರೆ. ತನ್ನ ಕಾರನ್ನು ಪುಡಿಗೈದಿದ್ದಾರೆ’’ ಎಂದು ಹಲ್ಲೆಗೊಳಗಾಗಿ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಖಾಲೀದ್ ತಿಳಿಸಿದ್ದಾರೆ.
ಈ ಬಗ್ಗೆ ತನಿಖೆ ನಡೆಯುತ್ತಿದ್ದು, ಪೊಲೀಸರು ಯಾವುದೇ ಹೇಳಿಕೆ ನೀಡಿಲ್ಲ.