ಇರಾ: ಪ್ರಥಮ ಹಂತದ ಗ್ರಾಮ ಸಭೆ
ಕೊಣಾಜೆ,ಜು.11: ಬಂಟ್ವಾಳ ತಾಲೂಕಿನ ಇರಾ ಗ್ರಾಮ ಪಂಚಾಯಿತಿಯ 2018-19 ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆಯು ಮಲೆಯಾಳಿ ಬಿಲ್ಲವ ಸೇವಾ ಸಂಘ(ರಿ) ಸಭಾಭವನದಲ್ಲಿ ಬುಧವಾರ ನಡೆಯಿತು.
ಸಭೆಯಲ್ಲಿ ಗ್ರಾಮದಲ್ಲಿ ಅಡಿಕೆ ಕೊಳೆರೋಗದ ಪರಿಹಾರ ಹಾಗೂ ಈ ಸಮಸ್ಯೆಯ ಬಗ್ಗೆ ಪಂಚಾಯಿತಿ ಹಾಗೂ ಕೃಷಿ ಇಲಾಖೆ ಸ್ಪಂದಿಸುವಂತೆ ಮನವಿ ಮಾಡಿದರು.
ಇರಾ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಅಬ್ದುಲ್ ರಝಾಕ್ ಕುಕ್ಕಾಜೆ ಅವರು ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಸರಕಾರ ವಿವಿಧ ಇಲಾಖೆಗಳಾದ ಕಂದಾಯ, ಆರೋಗ್ಯ, ಕೃಷಿ, ಮೆಸ್ಕಾಂ, ತೋಟಗಾರಿಕೆ, ಶಿಕ್ಷಣ, ಪಶುಸಂಗೋಪನಾ ಇಲಾಖೆ,ಪಂಚಾಯಿತಿರಾಜ್ ಇಂಜಿನಿಯರಿಂಗ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃಧ್ದಿ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡು ಇಲಾಖಾವಾರು ಮಾಹಿತಿಯನ್ನು ಗ್ರಾಮಸ್ಥರಿಗೆ ನೀಡಿದರು.
ಈ ಸಂದರ್ಭದಲ್ಲಿ ಕಂದಾಯ ಇಲಾಖೆಯ ಕಳೆದ ನಲ್ವತ್ತು ವರ್ಷಗಳಿಂದ ಸುದೀರ್ಘ ಪ್ರಾಮಾಣಿಕ ಹಾಗೂ ಪಾರದರ್ಶಕ ಸೇವೆ ಸಲ್ಲಿಸಿ ಇರಾ ಗ್ರಾಮದಲ್ಲಿ ಕಳೆದ ಮೂರು ವರ್ಷ ಸೇವೆ ಮಾಡಿ ಇದೀಗ ಜುಲೈ 2018ರಂದು ಸೇವೆಯಿಂದ ನಿವೃತ್ತಿಗೊಳ್ಳಲಿರುವ ಗ್ರಾಮಕರಣಿಕರಾದ ಎ.ಪಿ.ಭಟ್ರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಕುರ್ನಾಡು ಜಿಲ್ಲಾ ಪಂಚಾಯತ್ ಸದಸ್ಯೆ ಮಮತಾ ಡಿ.ಎಸ್ ಗಟ್ಟಿ ಅವರು ಈ ಸಂದರ್ಭದಲ್ಲಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಸೇವೆಯಲ್ಲಿರುವ ಸರಕಾರಿ ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸಿ ಜನರೊಂದಿಗೆ ಉತ್ತಮ ಸಂಬಂಧಗಳನ್ನು ಇಟ್ಟುಕೊಂಡರೆ ಗ್ರಾಮದ ಜನರು ಅವರನ್ನು ಸದಾ ನೆನಪಿನಲ್ಲಿಟ್ಟು ಗೌರವಿಸುತ್ತಾರೆ ಎಂದರು.
ಗ್ರಾಮ ಸಭೆಯಲ್ಲಿ ನೋಡೆಲ್ ಅಧಿಕಾರಿಯಾಗಿ ಬಂಟ್ವಾಳ ಅಕ್ಷರದಾಸೋಹ ಸಹಾಯಕ ನಿರ್ದೇಶಕ ನೋಣಯ್ಯ ನಾಯಕ್ ಪಾಲ್ಗೊಂಡಿದ್ದರು. ಗ್ರಾಮಪಂಚಾಯಿತಿ ಉಪಾಧ್ಯಕ್ಷರಾದ ಚಂದ್ರಾವತಿ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.
ಗ್ರಾಮ ಪಂಚಾಯಿತಿ ಅಭಿವೃಧ್ದಿ ಅಧಿಕಾರಿ ನಳಿನಿ ಎ.ಕೆ ಸ್ವಾಗತಿಸಿ, ಸಿಬ್ಬಂದಿ ಗುಲಾಬಿ ವಂದಿಸಿದರು.