ಬೈಂದೂರು, ಕುಂದಾಪುರಗಳಿಗೆ ಸಾರಿಗೆ ಸಚಿವರ ಭೇಟಿ
ಕುಂದಾಪುರ, ಆ.10: ರಾಜ್ಯ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಶುಕ್ರವಾರ ಕುಂದಾಪುರದ ಕೆಎಸ್ಸಾರ್ಟಿಸಿ ಬಸ್ನಿಲ್ದಾಣ ಹಾಗೂ ಡಿಪೋಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಅಲ್ಲದೇ ಸಿಬ್ಬಂದಿಗಳೊಂದಿಗೆ ಸಮಾಲೋಚನೆ ನಡೆಸಿದರು.
ಬಳಿಕ ಬೈಂದೂರಿಗೆ ಭೇಟಿ ನೀಡಿದ ಸಚಿವರು, ಯಡ್ತರೆಯಲ್ಲಿ ಕೆಎಸ್ಸಾರ್ಟಿಸಿ ಹೈಟೆಕ್ ಬಸ್ ನಿಲ್ದಾಣ ಹಾಗೂ ಡಿಪೋಗಾಗಿ ಮಂಜೂರಾಗಿರುವ ಜಾಗವನ್ನು ಪರಿಶೀಲಿಸಿದರಲ್ಲದೇ, ಬಸ್ನಿಲ್ದಾಣದ ಕಾಮಗಾರಿ ಇನ್ನೊಂದು ತಿಂಗಳಲ್ಲಿ ಪ್ರಾರಂಭಗೊಳ್ಳಲಿದೆ ಎಂದು ಈ ಸಂದರ್ಭದಲ್ಲಿ ಭರವಸೆ ನೀಡಿದರು.
ಕುಂದಾಪುರ, ಬೈಂದೂರಿನಿಂದ ಸಂಚರಿಸುತಿದ್ದ ಕೆಎಸ್ಸಾರ್ಟಿಸಿಯ ಗ್ರಾಮಾಂತರ ಸಾರಿಗೆ ಸ್ಥಗಿತಗೊಂಡಿರುವ ಕುರಿತು ಸಚಿವರ ಗಮನ ಸೆಳೆದಾಗ, ಈ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ಪರವಾನಿಗೆ ನವೀಕರಿಸಿ ಬಸ್ ಸಂಚಾರಕ್ಕೆ ಕ್ರಮಕೈಗೊಳ್ಳುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಬೈಂದೂರು ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ, ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ, ಮಂಗಳೂರು ವಿಭಾಗೀಯ ನಿಯಂತ್ರಕ ದೀಪಕ್ಕುಮಾರ್ ಹಾಗೂ ಹಿರಿಯ ಅಧಿಕಾರಿಗಳು, ತಹಶೀಲ್ದಾರ್ ಕಿರಣ್ ಗೌರಯ್ಯ, ಜಿಪಂ ಸದಸ್ಯ ಶಂಕರ ಪೂಜಾರಿ ಹಾಗೂ ಇತರರು ಉಪಸ್ಥಿತರಿದ್ದರು.