ಮುಡಿಪು: ಕೇರಳಕ್ಕೆ ತೆರಳಿದ್ದವರು ಸುರಕ್ಷಿತ
ಕೊಣಾಜೆ, ಆ. 18: ಕೇರಳಕ್ಕೆ ಪ್ರಾರ್ಥನೆಗೆಂದು ತೆರಳಿದ್ದ ಮುಡಿಪು ಹಾಗೂ ವಿಟ್ಲ ಪರಿಸರದ ಒಟ್ಟು ಎಂಟು ಮಂದಿಯ ತಂಡ ಸುರಕ್ಷಿತವಾಗಿದ್ದು, ಮನೆಗೆ ವಾಪಸ್ಸಾಗುತ್ತಿದ್ದಾರೆ ಎಂದು ಮನೆಮಂದಿ ಮಾಹಿತಿ ನೀಡಿದ್ದಾರೆ.
ಮುಡಿಪು ಸಮೀಪದ ಕಂಬ್ಲಪದವಿನ ರವಿ ಕುಟಿನ್ಹ, ಸ್ಟೀವನ್ ಕುಟಿನ್ಹಾ, ವಿಟ್ಲದ ಸುನಿಲ್, ಸುರೇಶ್ ಪ್ರಕಾಶ್, ವಿಜಯಡ್ಕದ ಪಿಲಿಫ್ ಡಿಸೋಜ ಮತ್ತು ಪಿಲಿಪ್ ಅವರ ಪತ್ನಿ ಹಾಗೂ ಇಬ್ಬರು ಮಕ್ಕಳು ಹೀಗೆ ಒಟ್ಟು ಎಂಟು ಮಂದಿ ಕಳೆದ ಶನಿವಾರದಂದು ಕೇರಳದ ತ್ರಿಶೂರ್ನ ಮುರಿಂಗೂರು ಬಳಿಯ ಡಿವೈನ್ ರಟ್ರೀಟ್ ಸೆಂಟರ್ಗೆ ಪ್ರಾರ್ಥನೆಗಾಗಿ ತೆರಳಿದ್ದರು.
ಕೇರಳದಲ್ಲಿ ಭಾರೀ ಮಳೆಯಿಂದಾಗಿ ಪ್ರವಾಹ ಸ್ಥಿತಿ ಉಂಟಾಗಿದ್ದು ಇವರಿದ್ದ ಐದು ಅಂತಸ್ತಿನ ಕಟ್ಟಡದಲ್ಲಿ 2ನೇ ಮಹಡಿವರೆಗೆ ನೀರು ತುಂಬಿಕೊಂಡಿದ್ದು ತಂಡದ ಸದಸ್ಯರಲ್ಲಿ ಆತಂಕ ಮೂಡಿಸಿತ್ತು.ಇದರಿಂದಾಗಿ ಮನೆಮಂದಿಯೂ ಆತಂಕದಲ್ಲಿದ್ದರು. ಇದೀಗ ಪ್ರಾರ್ಥನೆಗೆ ತೆರಳಿದ್ದ ಎಲ್ಲರೂ ಸುರಕ್ಷಿತವಾಗಿ ವಾಪಸ್ಸಾಗುತ್ತಿ ದ್ದಾರೆ ಎಂದು ತಿಳಿದು ಬಂದಿದೆ. ಸಚಿವ ಯು.ಟಿ.ಖಾದರ್ ಅವರು ಕೂಡಾ ಶನಿವಾರ ಬೆಳಿಗ್ಗೆ ಮುಡಿಪುವಿಗೆ ಭೇಟಿ ನೀಡಿ ವಾಪಸ್ಸಾಗುವ ಸುರಕ್ಷಿತ ಕ್ರಮಗಳ ಬಗ್ಗೆ ಭರವಸೆ ನೀಡಿದ್ದರು.