ಯೆನೆಪೊಯದಲ್ಲಿ ಎಂ.ಎಸ್ಸಿ ಜೀವ ವಿಜ್ಞಾನ ಕೋರ್ಸು ಉದ್ಘಾಟನೆ
ಉಳ್ಳಾಲ, ಆ. 18: ಯೆನೆಪೊಯ (ಪರಿಗಣಿಸಲ್ಪಟ್ಟ) ವಿಶ್ವವಿದ್ಯಾನಿಲಯದ ಯೆನೆಪೊಯ ಸಂಶೋಧನಾ ಕೇಂದ್ರದಲ್ಲಿ ಎಂ.ಎಸ್ಸಿ ಜೀವ ವಿಜ್ಞಾನ ಪದವಿ ಶಿಕ್ಷಣವು ಉದ್ಘಾಟನೆಗೊಂಡಿತು.
ಕಣ್ಣೂರು ಮತ್ತು ಕಲ್ಲಿಕೋಟೆ ವಿಶ್ವವಿದ್ಯಾನಿಲಯದ ವಿಶ್ರಾಂತ ಉಪ ಕುಲಪತಿ ಹಾಗೂ ಮಂಗಳೂರು ವಿಶ್ವವಿದ್ಯಾಲಯದ ಜೀವ ವಿಜ್ಞಾನ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಎಂ. ಅಬ್ದುಲ್ ರೆಹಮಾನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತ, ಅತ್ಯುತ್ತಮ ವೈದ್ಯಕೀಯ ಶಿಕ್ಷಣ ಸಂಸ್ಥೆಯಲ್ಲಿರುವ ಉನ್ನತ ಸೌಲಭ್ಯ ವಿರುವ ಸಂಶೋಧನಾ ಕೇಂದ್ರದ ಪ್ರಯೋಜನ ಪಡೆದು ಜೀವ ವಿಜ್ಞಾನದ ಜ್ಞಾನವನ್ನು ವೃದ್ಧಿಸಿಕೊಳ್ಳಿ ಎಂದು ವಿದ್ಯಾರ್ಥಿ ಗಳಿಗೆ ಕರೆ ನೀಡಿದರು. ಇದೇ ಸಂದರ್ಭದಲ್ಲಿ ತಮ್ಮ ವೃತ್ತಿ ಜೀವನದಲ್ಲಿ ಜೀವ ವಿಜ್ಞಾನ ಸ್ನಾತಕೋತ್ತರ ಪದವಿ ಪ್ರಾರಂಭಿಸಲು ನಡೆಸಿದ ಹೋರಾಟವನ್ನು ನೆನಪಿಸಿಕೊಂಡರು.
ಯೆನೆಪೊಯ ವಿಶ್ವವಿದ್ಯಾನಿಲಯದ ಉಪ ಕುಲಪತಿ ಡಾ. ಎಂ. ವಿಜಯಕುಮಾರ್ ಮಾತನಾಡುತ್ತ ಯುವ ಚೈತನ್ಯದ ನಮ್ಮ ವಿಶ್ವವಿದ್ಯಾಲಯವು ಎಲ್ಲಾ ಸೌಲಭ್ಯಗಳನ್ನು ಒದಗಿಸುವುದರೊಂದಿಗೆ, ತಜ್ಞ ಪ್ರಾಚಾರ್ಯರ ಮಾರ್ಗದರ್ಶನ ಸಿಗುತ್ತಿರುವುದರಿಂದ ವಿದ್ಯಾರ್ಥಿಗಳು ಜೀವ ವಿಜ್ಞಾನ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಬೇಕು ಎಂದು ಸಲಹೆ ನೀಡಿದರು.
ಸಂಶೋಧನಾ ಕೇಂದ್ರದ ಸೌಲಭ್ಯಗಳನ್ನು ಪಡೆದುಕೊಂಡು ವೈಯಕ್ತಿಕ ಅಭಿವೃದ್ಧಿಯೊಂದಿಗೆ ಸಮಾಜಕ್ಕೆ ಕೊಡುಗೆ ನೀಡಿ ಎಂದು ಆಶಿಸಿದರು. ವೇದಿಕೆಯಲ್ಲಿ ಯೆನೆಪೊಯ ವಿಶ್ವವಿದ್ಯಾನಿಲಯದ ಕುಲಸಚಿವರಾದ ಡಾ. ಜಿ. ಶ್ರೀಕುಮಾರ್ ಮೆನನ್, ಹಣಕಾಸು ಅಧಿಕಾರಿ ಮಹಮ್ಮದ್ ಬಾವ ಪಿ, ಸಹ ಪರಿಕ್ಷಾ ನಿಯಂತ್ರಕ ಡಾ.ಬಿ.ಟಿ ನಂದೀಶ್ , ಪ್ರಾಧ್ಯಾಪಕ ಡಾ.ಅರುಣ್ ಭಾಗವತ್ ಉಪಸ್ಥಿತರಿದ್ದರು.
ಸಹನಿರ್ದೇಶಕಿ ಡಾ.ರೇಖಾ ಪ್ರಸ್ತಾವಿಕ ವಾಗಿ ಮಾತನಾಡಿ ಸ್ವಾಗತಿಸಿದರು. ಡಾ. ಶಂಕರ್ ಪ್ರಸಾದ್ದಾಸ್ ಸಹಪ್ರಾಚಾರ್ಯರು ವಂದಿಸಿದರು. ಡಾ. ನೀವನ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.