ರಾಯಿ: ಅಂಗಡಿಗೆ ನುಗ್ಗಿ ನಗದು ಸಹಿತ ಸೊತ್ತು ಕಳವು
ಬಂಟ್ವಾಳ, ಸೆ. 8: ರಾಯಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಂಟ್ವಾಳ -ಮೂಡುಬಿದಿರೆ ಮುಖ್ಯ ರಸ್ತೆ ಬಳಿಯಿರುವ ಅಂಗಡಿಯೊಂದರ ಶಟರ್ ಬೀಗ ಮುರಿದು ಸೊತ್ತುಗಳನ್ನು ಕಳವುಗೈದ ಘಟನೆ ಶನಿವಾರ ಬೆಳಗ್ಗೆ ಬೆಳಕಿಗೆ ಬಂದಿದೆ.
ಇಲ್ಲಿನ ರಾಯಿ ಸಮೀಪದ ಕನ್ಯಾ ನಿವಾಸಿ ಪರಮೇಶ್ವರ ಪೂಜಾರಿ ಎಂಬವರಿಗೆ ಸೇರಿದ ಅಂಗಡಿಯಿಂದ ಈ ಕೃತ್ಯ ನಡೆದಿದೆ.
ಪರಮೇಶ್ವರ ಪೂಜಾರಿ ಅವರು ಕಳೆದ ಮೂರು ವರ್ಷಗಳಿಂದ ಅಂಗಡಿ ವ್ಯವಹಾರ ನಡೆಸುತ್ತಿದ್ದು, ಶುಕ್ರವಾರ ರಾತ್ರಿ ಸುಮಾರು ಎಂಟೂವರೆ ಗಂಟೆಗೆ ಇವರ ಪತ್ನಿ ಉಷಾ ಪೂಜಾರಿ ಎಂದಿನಂತೆ ಅಂಗಡಿಗೆ ಬೀಗ ಹಾಕಿ ಮನೆಗೆ ತೆರಳಿದ್ದರು. ಶನಿವಾರ ಬೆಳಗ್ಗೆ ಏಳು ಗಂಟೆಗೆ ಎಂದಿನಂತೆ ಇವರ ಪುತ್ರ ಲತೇಶ್ ಕುಮಾರ್ ಅವರು ಅಂಗಡಿ ಬಳಿ ಬೈಕ್ ನಿಲ್ಲಿಸಿ ಬಸ್ಸಿನಲ್ಲಿ ಮಂಗಳೂರಿಗೆ ಕೆಲಸಕ್ಕೆ ಹೋಗಲು ಬಂದಾಗ ಅಂಗಡಿ ಶಟರ್ ಮೇಲೆತ್ತಿರುವುದು ಕಂಡು ಬಂದಿದೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.
ಅಂಗಡಿಯೊಗಿನ ಪರ್ಸಿನಲ್ಲಿದ್ದ 5 ಸಾವಿರ ರೂ. ನಗದು ಮತ್ತು ನಾಲ್ಕು ಜೊತೆ ಚಪ್ಪಲಿಗಳು ಕಳವಾಗಿದೆ ಎಂದು ಅಂಗಡಿ ಮಾಲಕ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು, ಇಲ್ಲಿನ ಪಂಚಾಯತ್ ಮತ್ತು ಅಂಗಡಿಯೊಂದರ ಎದುರು ಅಳವಡಿಸಿರುವ ಸಿಸಿ ಕ್ಯಾಮೆರಾವನ್ನು ಪರಿಶೀಲನೆ ನಡೆಸಿದ್ದಾರೆ.