ಉಡುಪಿ: ಜಿಲ್ಲಾಸ್ಪತ್ರೆಯ ಸಿಬ್ಬಂದಿ ಕೊರತೆ ಪರಿಹರಿಸುವಂತೆ ಆಗ್ರಹಿಸಿ ಮನವಿ
ಉಡುಪಿ, ಸೆ.19: ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆಯನ್ನು ಬಗೆಹರಿಸುವಂತೆ ಆಗ್ರಹಿಸಿ ಉಡುಪಿ ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ ಬುಧ ವಾರ ಉಡುಪಿ ಅಪರ ಜಿಲ್ಲಾಧಿಕಾರಿ ಕೆ.ವಿದ್ಯಾ ಕುಮಾರಿ ಅವರಿಗೆ ಮನವಿ ಸಲ್ಲಿಸಿತು.
ಜಿಲ್ಲಾಸ್ಪತ್ರೆಯಲ್ಲಿ ನರ್ಸ್ಗಳು, ಸೆಕ್ಯೂರ್ಟಿಗಾರ್ಡ್, ಲ್ಯಾಬ್ ಪರಿಣತರು ಸೇರಿದಂತೆ ಹಲವು ಸಿಬ್ಬಂದಿಗಳ ಕೊರತೆಯಿಂದ ಜಿಲ್ಲೆಯ ಎಲ್ಲ ತಾಲೂಕು ಹಾಗೂ ಹೊರ ಜಿಲ್ಲೆಗಳಿಂದ ಬರುವ ರೋಗಿಗಳು, ಗಾಯಾಳುಗಳು ಸರಿ ಯಾದ ಚಿಕಿತ್ಸೆ ದೊರೆಯದೆ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಮನವಿ ಯಲ್ಲಿ ದೂರಲಾಗಿದೆ.
ನಗರದ ಕವಿ ಮುದ್ದಣ ಮಾರ್ಗದಲ್ಲಿರುವ ಹೆಂಗಸರ ಮತ್ತು ಮಕ್ಕಳ ಆಸ್ಪತ್ರೆ ನವೀಕರಣ ಕಾಮಗಾರಿ ನಡೆಯುವ ಕಾರಣದಿಂದ ಇಲ್ಲಿಯ ಸೇವೆಯು ಸ್ಥಗಿತ ಗೊಳ್ಳಲಿದೆ. ಇಲ್ಲಿಯ ಸಿಬ್ಬಂದಿಗಳನ್ನಾದರೂ ಜಿಲ್ಲಾಸ್ಪತ್ರೆಗೆ ನಿಯೋಜನೆ ಮಾಡ ಬೇಕು ಎಂದು ಸಮಿತಿಯು ಮನವಿಯಲ್ಲಿ ಒತ್ತಾಯಿಸಿದೆ.
ಈ ಸಂದರ್ಭದಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು, ಸದಸ್ಯ ತಾರಾನಾಥ್ ಮೇಸ್ತ ಶಿರೂರು, ಬ್ರಹ್ಮಗಿರಿ ಲಯನ್ಸ್ ಕ್ಲಬ್ ಪದಾಧಿಕಾರಿಗಳಾದ ವಾದಿರಾಜ್, ವಾಸುದೇವ್ ಚಿಟ್ಪಾಡಿ ಉಪಸ್ಥಿತರಿದ್ದರು.