ಅಖಿಲ ಭಾರತ ಕಾರ್ಮಿಕ ಸಂಘದಿಂದ ಪ್ರತಿಕೃತಿ ದಹಿಸಿ ಧರಣಿ
ಮಂಗಳೂರು, ಸೆ. 21: ಬೀಡಿ ಕಾರ್ಮಿಕರ ಆಸ್ಪತ್ರೆ ನಿರ್ಮಾಣ ಹಾಗೂ ಮಸಾಜ್ ಪಾರ್ಲರ್, ಕ್ಲಬ್, ಪಬ್, ಸ್ಕಿಲ್ಗೇಮ್ ಮೊದಲಾದ ಅನಧಿಕೃತ ದಂಧೆಗಳನ್ನು ನಿಲ್ಲಿಸುವಂತೆ ಒತ್ತಾಯಿಸಿ ಇಂದು ಅಖಿಲ ಭಾರತ ಕಾರ್ಮಿಕ ಸಂಘದ ವತಿಯಿಂದ ಪ್ರತಿಕೃತಿ ದಹಿಸಿ ಧರಣಿ ನಡೆಸಲಾಯಿತು.
ಕಾರ್ಮಿಕ ಇಲಾಖೆ ಅನಧಿಕೃತ ದಂಧೆಗಳ ಬಗ್ಗೆ ವೌನ ವಹಿಸಿದೆ ಎಂದು ಆರೋಪಿಸಿ ನಡೆದ ಧರಣಿಯ ವೇಳೆ ಕಾರ್ಮಿಕ ಇಲಾಖೆಯ ಪ್ರತಿಕೃತಿಯನ್ನು ದಹಿಸಲಾಯಿತು.
ಧರಣಿನಿರತರನ್ನುದ್ದೇಶಿಸಿ ಮಾತನಾಡಿದ ಸುದತ್ತ ಜೈನ್ ಶಿರ್ತಾಡಿ, ಬೀಡಿ ಕಾರ್ಮಿಕರ ಆಸ್ಪತ್ರೆ ನಿರ್ಮಾಣಕ್ಕೆ ಸಾಕಷ್ಟು ಹೋರಾಟ ನಡೆಸಿದರೂ ಪ್ರಯೋಜನವಾಗಿಲ್ಲ. ಮಾತ್ರವಲ್ಲದೆ ಕಳೆದ ಆಗಸ್ಟ್ನಲ್ಲಿ ಆಸ್ಪತ್ರೆ ನಿರ್ಮಾಣದ ಜತೆಗೆ, ನಗರದಲ್ಲಿ ನಡೆಯುತ್ತಿರುವ ಅಕ್ರಮ ದಂಧೆಗಳನ್ನು ನಿಲ್ಲಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ. ಆದರೆ ಯಾವುದೇ ಕ್ರಮ ಆಗಿಲ್ಲ ಎಂದು ದೂರಿದರು.
ಧರಣಿಯಲ್ಲಿ ಅನಿತಾ ಶಿರ್ತಾಡಿ, ವಿಜಯಶ್ರೀ ಮೊದಲಾದವರು ಮಾತನಾಡಿದರು. ಕಾರ್ಮಿಕ ಸಂಘದ ಜಿಲ್ಲಾಧ್ಯಕ, ಸಂತೋಷ್ ಕಾವೂರು, ಪ್ರಧಾನ ಕಾರ್ಯದರ್ಶಿ ರಾಜು ಕುಲಾಲ್, ದೀಪಕ್ ರಾವ್, ರವಿ ಕಾವೂರು ಉಪಸ್ಥಿತರಿದ್ದರು.