ಕಸಾಯಿಖಾನೆ ಸ್ಮಾರ್ಟ್ ಸಿಟಿ ಹಣ ವಿವಾದ: ಸುದ್ದಿಗೋಷ್ಠಿಯಿಂದ ಅರ್ಧದಲ್ಲೇ ಎದ್ದುಹೋದ ಶಾಸಕ ಸಂಜೀವ ಮಠಂದೂರು
ಸುದ್ದಿಗೋಷ್ಠಿಯಲ್ಲಿ ಅರ್ಧಕ್ಕೆ ಎದ್ದು ಹೋಗುತ್ತಿರುವ ಶಾಸಕ ಮಠಂದೂರು
ಮಂಗಳೂರು, ಅ. 9: ತಮ್ಮದೇ ಅಧ್ಯಕ್ಷತೆಯಲ್ಲಿ ನಗರದ ದ.ಕ. ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಶಾಸಕ ಸಂಜೀವ ಮಠಂದೂರು ಅವರು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸದೇ ಅರ್ಧದಲ್ಲೇ ಎದ್ದುಹೋದ ಘಟನೆ ಮಂಗಳವಾರ ನಡೆದಿದೆ.
‘ಸ್ಮಾರ್ಟ್ಸಿಟಿ ಯೋಜನೆಯಡಿ ಕಸಾಯಿಖಾನೆ ಅಭಿವೃದ್ಧಿಗೆ 15 ಕೋಟಿ ರೂ.ನ್ನು ಸಚಿವ ಖಾದರ್ ನೀಡಿದ್ದಾರೆ ಎಂದರೆ ಅದು ನಗರದ ಸ್ವಚ್ಛತೆ ಬಗ್ಗೆ ಕಾಳಜಿಯಿಂದಾಗಿಯೇ ಅಲ್ಲವೇ ಎಂದು ಸುದ್ದಿಗಾರರು ಶಾಸಕರನ್ನು ಪ್ರಶ್ನಿಸಿದರು.
ಈ ಸಂದರ್ಭ ಕೆಲಹೊತ್ತು ಕಳವಳಕ್ಕೀಡಾದ ಶಾಸಕ ಸಂಜೀವ ಮಠಂದೂರು, ಯಾವುದೇ ಪ್ರಶ್ನೆಗೂ ಸಮರ್ಪಕವಾಗಿ ಉತ್ತರಿಸದೇ ಅರ್ಧದಲ್ಲೇ ಎದ್ದು ಹೋಗುವ ಮೂಲಕ ಸುದ್ದಿಗೋಷ್ಠಿಯ ವೇದಿಕೆಯಲ್ಲಿ ಕುಳಿತಿದ್ದ ಶಾಸಕರಾದ ಭರತ್ ಶೆಟ್ಟಿ, ವೇದವ್ಯಾಸ ಕಾಮತ್ ಮತ್ತಿತರರಿಗೆ ಮುಜುಗರವನ್ನುಂಟು ಮಾಡಿದರು.
ಇದಕ್ಕೂ ಮೊದಲು, ಸುದ್ದಿಗಾರರ ಮತೊಂದು ಪ್ರಶ್ನೆಗೆ ಉತ್ತರಿಸಲು ವಿಫಲರಾದ ಶಾಸಕ ಮಠಂದೂರು, ‘ಸುದ್ದಿಗೋಷ್ಠಿಯಲ್ಲಿ ಇಷ್ಟೇ ಸಾಕು, ಇಲ್ಲಿಗೆ ಮುಗಿಸೋಣ’ ಎಂದು ಹೇಳಿ, ಮೈಕ್ನ್ನು ಆಫ್ ಮಾಡಲೂ ಹೋದ ಘಟನೆ ನಡೆದಿತ್ತು.