ಬೆದರಿಕೆ ಆರೋಪ: ಮರಣಪತ್ರ ಬರೆದಿಟ್ಟು ಕೋಟೇಶ್ವರದ ಯುವಕ ಆತ್ಮಹತ್ಯೆ
ಕುಂದಾಪುರ, ಅ.18: ಕೋಟೇಶ್ವರ ಗ್ರಾಮದ ಮಾರ್ಕೋಡುವಿನ ಉದಯ ಮೊಗವೀರ ಎಂಬವರ ಮಗ ವಿವೇಕ್ (23) ಎಂಬವರು ಮರಣ ಪತ್ರ ಬರೆದಿಟ್ಟು ಅ.15ರಂದು ಸಂಜೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಮೃತರ ಮರಣ ದಲ್ಲಿ ಸಂಶಯವಿರುವುದಾಗಿ ಮೃತರ ಸಹೋದರ ವಿಶ್ವಾಸ್ ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೋಣೆಯಲ್ಲಿ ಪತ್ತೆಯಾದ ಮೂರುವರೆ ಪುಟದ ಮರಣ ಪತ್ರದಲ್ಲಿ ನನ್ನ ಸಾವಿಗೆ ಉಗ್ರಗಾಮಿ ಸಂಘಟನೆ ಕಾರಣ. ಆ ಸಂಘಟನೆಯಿಂದ ನನಗೆ ಕೊಲೆ ಬೆದರಿಕೆ ಇದೆ ಹಾಗೂ ನನ್ನ ಮನೆಯವರ ಪ್ರಾಣಕ್ಕೂ ಅಪಾಯ ಇದೆ. ಆಕಸ್ಮಿಕ ವಾಗಿ ಕೆಲವು ವರ್ಷಗಳ ಹಿಂದೆ ಈ ಸಂಘಟನೆಯ ಪರಿಚಯವಾಗಿತ್ತು. ಇವರ ಎಲ್ಲ ಮಾಹಿತಿ ನನಗೆ ತಿಳಿದಿದೆ. ಇದರಿಂದ ತಪ್ಪಿಸಿಕೊಳ್ಳಲು ಊರು ಬಿಡಲು ನಿರ್ಧರಿಸಿದ್ದೆ. ಆದರೆ ಅದಕ್ಕಿಂತ ಸಾಯುವುದೇ ಲೇಸು ಎಂದು ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ವಿವೇಕ್ ಬರೆದಿದ್ದಾನೆ ಎಂದು ತಿಳಿದು ಬಂದಿದೆ.
ವಿವೇಕ್ ಬರೆದ ಮರಣ ಪತ್ರದಲ್ಲಿ ಭಯೋತ್ಪಾದನೆ ಸಂಘಟನೆಯ ಹೆಸರನ್ನು ಉಲ್ಲೇಖಿಸಿದ್ದು, ಅಂತಹ ಯಾವುದೇ ಉಗ್ರಗಾಮಿ ಸಂಘಟನೆಯೇ ಎಲ್ಲೂ ಇಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈತ ಮಾನಸಿಕ ಸ್ಥಿಮಿತ ಕಳೆದುಕೊಂಡು ಈ ರೀತಿ ಬರೆದಿದ್ದಾನೆಯೇ ಎಂಬುದರ ಬಗ್ಗೆ ಹಾಗೂ ಪತ್ರದ ಸತ್ಯಾ ಸತ್ಯತೆ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.