ಉಪ್ಪಿನಂಗಡಿ ಕಾಲೇಜಿನ ವಿದ್ಯಾರ್ಥಿಗಳ ಮ್ಯಾಗಝಿನ್ ‘ಎಕ್ಸ್ಪ್ಲೋರರ್ ’ಬಿಡುಗಡೆ
ಉಪ್ಪಿನಂಗಡಿ, ಅ.17:ಇಲ್ಲಿನ ಉಪ್ಪಿನಂಗಡಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ಶಾಸ್ತ್ರ ಮತ್ತು ವ್ಯವಹಾರ ಅಧ್ಯಯನ ಸಂಘ ಮತ್ತು ಐ.ಕ್ಯೂ.ಎ.ಸಿ ವಿಭಾಗದ ವತಿಯಿಂದ ವಿದ್ಯಾರ್ಥಿಗಳ ಮ್ಯಾಗಝಿನ್ ‘ಎಕ್ಸ್ಪ್ಲೋರರ್’ನ್ನು ಉಪ್ಪಿನಂಗಡಿ ಪ್ರಥಮ ದರ್ಜೆ ಕಾಲೇಜಿನ ಹಳೆ ವಿದ್ಯಾರ್ಥಿ ಹಾಗೂ ವಾರ್ತಾಭಾರತಿ ಪತ್ರಿಕೆಯ ಮಂಗಳೂರು ಬ್ಯೂರೋ ಮುಖ್ಯಸ್ಥ ಪುಷ್ಪರಾಜ್ ಬಿ.ಎನ್ ಇಂದು ಕಾಲೇಜಿನಲ್ಲಿ ಹಮ್ಮಿಕೊಂಡ ಸಮಾರಂಭದಲ್ಲಿ ಬಿಡುಗಡೆಗೊಳಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಉಪ್ಪಿನಂಗಡಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಸುಬ್ಬಪ್ಪ ಕೈಕಂಬ ಮಾತನಾಡುತ್ತಾ, ಉಪ್ಪಿನಂಗಡಿ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಮೂಲಕ ಎಕ್ಸ್ಪ್ಲೋರರ್ ಮ್ಯಾಗಝಿನ್ ಪ್ರಥಮ ಬಾರಿಗೆ ಬಿಡುಗಡೆಯಾಗುತ್ತಿದೆ. ವಿದ್ಯಾರ್ಥಿಗಳ ಮೂಲಕ ಒಂದು ಉತ್ತಮ ಪ್ರಯತ್ನ ನಡೆದಿದೆ. ವಿದ್ಯಾರ್ಥಿಗಳ ವೈಯಕ್ತಿಕ ಬೆಳವಣಿಗೆಗೆ ಮತ್ತು ಚಿಂತನೆಗೆ ಪತ್ರಿಕೆ ಸಹಕಾರಿಯಾಗಲಿ ಎಂದು ಸುಬ್ಬಪ್ಪ ಕೈಕಂಬ ಪತ್ರಿಕಾ ತಂಡಕ್ಕ ಶುಭಹಾರೈಸಿದರು.
ಸತ್ಯದ ಅನ್ವೇಷಣೆ , ಸಾರ್ವಜನಿಕ ಹಿತಾಸಕ್ತಿಯ ನೆಲೆಯಲ್ಲಿ ಪ್ರಜಾಪ್ರಭುತ್ವದ ನಾಲ್ಕನೆ ಅಂಗವಾಗಿ ಕಾರ್ಯನಿರ್ವಹಿಸುವ ಹೊಣೆಗಾರಿಕೆಯನ್ನು ಹೊತ್ತಿರುವ ಪತ್ರಿಕೆಗಳು ಸಮಾಜದಲ್ಲಿ ಜನರನ್ನು ಚಿಂತನೆಗೆ ಹಚ್ಚುವ, ಎಚ್ಚರಿಸುವ ಕಾರ್ಯವನ್ನು ಮುಖ್ಯವಾಹಿನಿಯಲ್ಲಿರುವ ಪತ್ರಿಕೆಗಳು ಮಾಡುತ್ತಾ ಬಂದಿದೆ. ಶಾಲಾ ಮಟ್ಟದಲ್ಲಿ ಹೊರತರುವ ಪತ್ರಿಕೆಗಳು ಅಲ್ಲಿನ ವಿದ್ಯಾರ್ಥಿಗಳ ಚಟುವಟಿಕೆಗಳ ಮುಖವಾಣಿಯಾಗಿ ಅವರ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆಯಾಗಲಿ ಮಾಹಿತಿ ವಿನಮಯಕ್ಕೆ ಜ್ಞಾನಾರ್ಜನೆಗೆ ಸಹಾಯವಾಗಲಿ ಎಂದು ಪುಷ್ಪರಾಜ್ ಬಿ.ಎನ್ ಶುಭ ಹಾರೈಸಿದರು.
ವಾಣಿಜ್ಯ ಮತ್ತು ವ್ಯವಹಾರ ಅಧ್ಯಯನ ವಿಭಾಗದ ಮುಖ್ಯಸ್ಥ ಅಹಮ್ಮದ್ ಎಸ್.ಎಂ ಪ್ರಾಸ್ತಾವಿಕ ಭಾಷಣ ಮಾಡಿದರು.
ಸಮಾರಂಭದಲ್ಲಿ ವಿದ್ಯಾರ್ಥಿಗಳಾದ ಸಮದ್ ಕಾರ್ಯಕ್ರಮ ನಿರೂಪಿಸಿದರು.ವಿದ್ಯಾಶ್ರೀ ಸ್ವಾಗತಿಸಿದರು. ಅಬೂಬಕ್ಕರ್ ಸಿದ್ಧಿಕ್ ಅತಿಥಿಗಳನ್ನು ಪರಿಚಯಿಸಿದರು. ವೇದಿಕೆಯಲ್ಲಿ ರೂಸಾ ಸಂಯೋಜಕರಾದ ಉಸ್ಮಾನ್.ಎ,ಐಕ್ಯೊಸಿ ಸಂಯೋಜಕಿ ಬಸವ ರಾಜೇಶ್ವರಿ, ಕಾಲೇಜಿನ ಉಪನ್ಯಾಸಕ ವೃಂದದವರು ಹಾಗೂ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಂತಿಮ ಬಿ.ಕಾಂ ತರಗತಿಯ ಸ್ನೇಹ ವಂದಿಸಿ, ಸಮದ್ ಕಾರ್ಯಕ್ರಮವನ್ನು ನಿರೂಪಿಸಿದರು.