ಕೃಷ್ಣಾಪುರ: ಎಸೆಸ್ಸೆಫ್ ವತಿಯಿಂದ ಕುಕ್ಕಾಡಿಯಲ್ಲಿ ಬಸ್ ತಂಗುದಾಣ ನಿರ್ಮಾಣ
ಮಂಗಳೂರು, ಅ. 18: ಕರ್ನಾಟಕ ರಾಜ್ಯ ಎಸೆಸ್ಸೆಫ್ ಹಾಗೂ ಎಸ್ ವೈ ಎಸ್ ಕೃಷ್ಣಾಪುರ ಶಾಖೆಯ 20ನೇ ವರ್ಷಾಚರಣೆ ಅಂಗವಾಗಿ ಸ್ಥಳೀಯ ಕೇಂದ್ರ ಜುಮಾ ಮಸೀದಿ ಬಳಿಯಿರುವ ಕುಕ್ಕಾಡಿಯಲ್ಲಿ ಬಸ್ಸು ತಂಗುದಾಣ ನಿರ್ಮಿಸಿ ಲೋಕೋಪಯೋಗಕ್ಕಾಗಿ ಅರ್ಪಿಸಲಾಯಿತು.
ಸುಸಜ್ಜಿತ ಬಸ್ಸು ತಂಗುದಾಣದ ಉದ್ಘಾಟನೆಯನ್ನು ಕೇಂದ್ರ ಜುಮಾ ಮಸೀದಿಯ ಅಧ್ಯಕ್ಷರಾದ ಹಾಜಿ ಬಿಎಂ ಮುಮ್ತಾಝ್ ಅಲಿ ಹಾಗೂ ಮಾಜಿ ಶಾಸಕರಾದ ಬಿಎಂ ಮೊಯ್ದಿನ್ ಬಾವ ನೆರವೇರಿಸಿದರು.
ದುಆ ನೆರವೇರಿಸಿದ ಕಾರ್ಯಕ್ರಮದ ಮುಖ್ಯ ಅತಿಥಿ ಹಾಗೂ ಸ್ಥಳೀಯ ಖತೀಬರಾದ ಫಾರೂಕ್ ಸಖಾಫಿ ಅವರು ಮಾತನಾಡಿ ಎಸ್ ವೈ ಎಸ್ ಹಾಗೂ ಎಸೆಸ್ಸೆಫ್ ಕಳೆದ 20 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು.
ಸ್ಥಳೀಯ ಶಾಲೆಯ ಸಾವಿರಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಮಾತ್ರವಲ್ಲದೆ ಸ್ಥಳೀಯ ನಾಗರಿಕರಿಗೆ ಈ ಪ್ರದೇಶದಲ್ಲಿ ಬಸ್ಸು ತಂಗುದಾಣದ ಅನಿವಾರ್ಯತೆ ಯನ್ನು ಮನಗಂಡು ಎಸ್ ವೈ ಎಸ್ ಹಾಗೂ ಎಸೆಸ್ಸೆಫ್ ಈ ಯೋಜನೆಯನ್ನು ಕೈಗೆತ್ತಿ ಕೊಂಡಿತ್ತು.
ಬದ್ರಿಯಾ ಜುಮಾ ಮಸೀದಿಯ ಮಾಜಿ ಅಧ್ಯಕ್ಷ ಹಾಜಿ ಬಿಎಂ ಹುಸೈನ್ , ಉಸ್ಮಾನ್, ಎಸ್ ವೈ ಎಸ್ ಕೃಷ್ಣಾಪುರ ಶಾಖೆಯ ಅಧ್ಯಕ್ಷ ಮುಹಮ್ಮದ್, ಸ್ಥಳೀಯ ಕಾರ್ಪೊರೇಟರ್ ಅಯಾಝ್ ಹಾಗೂ ಇತರ ಗಣ್ಯ ವ್ಯಕ್ತಿಗಳು ಉಪಸ್ಥಿತರಿದ್ದರು.