ರಾಜ್ಯ ಸರಕಾರದಿಂದ ಇಬ್ಬಗೆಯ ನೀತಿ: ಸಿ.ಟಿ.ರವಿ
ಮಂಗಳೂರು, ನ.14: ರಾಜ್ಯದ ಸಮ್ಮಿಶ್ರ ಸರಕಾರದಿಂದ ಇಬ್ಬಗೆ ನೀತಿ ಅನುಸರಿಸುತ್ತಿದೆ ಎಂದು ಶಾಸಕ ಸಿ.ಟಿ.ರವಿ ಸುದ್ದಿ ಗೋಷ್ಠಿಯಲ್ಲಿಂದು ಆರೋಪಿಸಿದರು.
ಟಿಪ್ಪು ಕುರಿತು ಸಂತೋಷ್ ತಮ್ಮಯ್ಯ ಗೋಣಿಗೊಪ್ಪದಲ್ಲಿ ಹೇಳಿಕೆ ನೀಡಿದ್ದರು ಅವರನ್ನು ಮಧ್ಯರಾತ್ರಿ ಬಂಧಿಸಿ ಸರಕಾರ ತನ್ನ ಸಾಮರ್ಥ್ಯ ತೋರಿದೆ ರಾಮನ ಬಗ್ಗೆ, ಹಿಂದೂ ಧರ್ಮದ ಬಗ್ಗೆ ಟೀಕಿಸಿದ್ದವರನ್ನು ಬಂಧಿಸಿಲ್ಲ ಯಾಕೆ? ಸಂತೋಷ್ ಬಂಧನವನ್ನು ಬಿಜೆಪಿ ಖಂಡಿಸುತ್ತದೆ. ಕಾಂಗ್ರೆಸ್ ಸರಕಾರವಿದ್ದಾಗ ಎಸಿಬಿ ಬಳಸಿ ಭ್ರಷ್ಟರನ್ನು ಉಳಿಸುತ್ತಿದ್ದರು. ಸಮ್ಮಿಶ್ರ ಸರಕಾರ ಸಿಸಿಬಿ- ಸಿಒಡಿಗಳನ್ನು ಕೂಡಾ ದುರ್ಬಳಕೆ ಮಾಡುತ್ತಿದ್ದರು ಎಂದು ಸಿ.ಟಿ.ರವಿ ಟೀಕಿಸಿದರು.
ನೋಟು ನಿಷೇಧಕ್ಕೆ ಸಂಬಂಧಿಸಿ ರಾಹುಲ್ ನೇತೃತ್ವದಲ್ಲಿ ಚಳುವಳಿ ನಡೆಸಲಾಗಿತ್ತು. ಶ್ರೀಮಂತರಿಗೆ ಸಹಾಯ ಮಾಡಲು ಹಾಗೂ ಭ್ರಷ್ಟರನ್ನು ಉಳಿಸಲು ನೋಟು ನಿಷೇಧ ಎಂದು ಟೀಕಿಸುತ್ತಿದ್ದಾರೆ. ಭ್ರಷ್ಟರು ಮಾತ್ರ ನೋಟು ಬ್ಯಾನ್ಗೆ ಹೆದರಬೇಕು, ದೇಶಕ್ಕೆ ಇದರಿಂದ ಲಾಭವಾಗಿದೆ. ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರವಿದ್ದಾಗ ಅರ್ಹರಲ್ಲದವರಿಗೆ ಸಾಲ ನೀಡಲಾಗಿತ್ತು. ಸಾಲ ಪಡೆದವರು ಮರುಕಳಿಸದೆ ದೇಶ ಬಿಟ್ಟು ಓಡಿದ್ದಾರೆ ಎಂದರು.
ಯುಪಿಎ ಸರಕಾರವಿದ್ದಾಗ ದೇಶದಲ್ಲಿ ಶೇ. 36 ಶೌಚಾಲಯ ನಿರ್ಮಾಣವಾಗಿತ್ತು. ಆದರೆ, ಎನ್ಡಿಎ ಸರಕಾರದ ಮೂಲಕ ಶೇ. 96 ರಷ್ಟು ಶೌಚಾಲಯ ನಿರ್ಮಾಣವಾಗಿದೆ. ಕಾಂಗ್ರೆಸ್ ಸರಕಾರವಿದ್ದಾಗ 3.43 ಕೋಟಿ ಬೋಗಸ್ ಎಲ್ಪಿಜಿ ಕನೆಕ್ಷನ್ ಪತ್ತೆಯಾಗಿತ್ತು. ಆದರೆ, ಬಿಜೆಪಿ ಸರಕಾರದಲ್ಲಿ 11 ಕೋಟಿ ಎಲ್ಪಿಜಿ ಕನೆಕ್ಷನ್ ಪೈಕಿ ಬಡವರಿಗೆ 5 ಲಕ್ಷ ಉಚಿತ ಎಲ್ಪಿಜಿ ಸಂಪರ್ಕ ನೀಡಲಾಗಿದೆ ಎಂದು ಸಿ.ಟಿ.ರವಿ ತಿಳಿಸಿದರು.
ಸುದ್ದಿಗೋಷ್ಠಿ ಯಲ್ಲಿ ಶಾಸಕ ಹಾಗೂ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜೀವ ಮಠಂದೂರು, ಸಂಸದ ನಳಿನ್ ಕುಮಾರ್ ಕಟೀಲ್, ಬಿಜೆಪಿ ಮುಖಂಡರಾದ ಪ್ರತಾಪ್ ಸಿಂಹ ನಾಯಕ್, ಬ್ರಿಜೇಶ್ ಚೌಟ, ಹರಿಕೃಷ್ಣ ಬಂಟ್ವಾಳ್ ಮೊದಲಾದ ವರು ಉಪಸ್ಥಿತರಿದ್ದರು.