ಸೊಂಟದ ಸ್ವಾಧೀನ ಇಲ್ಲದೆ ಅಸಹಾಯಕ ಸ್ಥಿತಿಯಲ್ಲಿದ್ದ ಯುವಕನ ರಕ್ಷಣೆ
ಉಡುಪಿ, ನ.14: ನಗರದ ಬಡುಗುಪೇಟೆ ಕಲ್ಸಂಕದ ಅಂಗಡಿಯೊಂದರ ಜಗುಲಿಯಲ್ಲಿ ಕಳೆದ ಒಂದು ತಿಂಗಳಿದ ಸೊಂಟದ ಸ್ವಾಧೀನ ಕಳೆದುಕೊಂಡು ನಡೆಯಲಾಗದೆ ಅಸಹಾಯಕ ಸ್ಥಿತಿಯಲ್ಲಿದ್ದ ಅಪರಿಚಿತ ಯುವಕನನ್ನು ಉಡುಪಿಯ ಸಮಾಜಸೇವಕರು ಮಂಗಳವಾರ ರಕ್ಷಿಸಿ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.
ಸೊಂಟದ ಸ್ವಾಧೀನ ಇಲ್ಲದೆ, ಮಲಗಿದಲ್ಲಿಯೇ ಶೌಚಾದಿಗಳನ್ನು ಮಾಡಿ ಕೊಂಡು, ಸರಿಯಾದ ಅನ್ನ ಆಹಾರ ಇಲ್ಲದೆ, ನಿತ್ರಾಣದಿಂದ ನರಳಾಡುತ್ತಿದ್ದ, ಯುವಕನ ದಯನೀಯ ಸ್ಥಿತಿಯನ್ನು ಗಮನಿಸಿದ ಸಮಾಜಸೇವಕ ಭಾಸ್ಕರ ಶೇರಿಗಾರ್, ಸಾಮಾಜಿಕ ಕಾರ್ಯಕರ್ತ ನಿತ್ಯಾನಂದ ಒಳಕಾಡು ಅವರಿಗೆ ಮಾಹಿತಿ ನೀಡಿದರು. ಇದಕ್ಕೆ ಸ್ಪಂದಿಸಿದ ನಿತ್ಯಾನಂದ ಒಳಕಾಡು ಹಾಗೂ ತಾರಾ ನಾಥ್ ಮೇಸ್ತ ಶಿರೂರು ಸ್ಥಳಕ್ಕೆ ಆಗಮಿಸಿದರು.
ಬಳಿಕ ಯುವಕನನ್ನು ಶ್ರೀೀಕೃಷ್ಣ ಮಠದ ರಾಜಾಂಗಣದ ಬಳಿಯ ಯಾತ್ರಿಕರ ಸ್ನಾನಗೃಹಕ್ಕೆ ಕರೆದುಕೊಂಡು ಹೋಗಿ, ಸ್ನಾನ ಮಾಡಿಸಿ ಗಡ್ಡ ಬೋಳಿಸಿ ಶುಚಿ ಗೊಳಿಸಿ, ಆತನಿಗೆ ಹೊಸ ಬಟ್ಟೆ ತೊಡಿಸಿದರು. ತದನಂತರ ಅವರನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. ರೋಗಿಯ ಊಟದ ವ್ಯವಸ್ಥೆಗೆ ಬಟ್ಟಲು, ಲೋಟೆ, ಧರಿಸಲು ಹೊಸ ಬಟ್ಟೆ, ಆಸ್ಪತ್ರೆಯಲ್ಲಿ ಸೇವೆಗೆ ಸೇಕನನ್ನು ವ್ಯವಸ್ಥೆ ಮಾಡಲಾಗಿದೆ.
ಯುವಕನು ತನ್ನ ಹೆಸರು ನಕುಲ(28) ಎಂದು ಹೇಳಿಕೊಂಡಿದ್ದು, ತಂದೆ ಸುರೇಶ, ಬೊಮ್ಮನಹಳ್ಳಿ, ಹಾನಗಲ್ ತಾಲೂಕು, ಹಾವೇರಿ ಜಿಲ್ಲೆ ಎಂಬ ಗೊಂದಲದ ವಿಳಾಸ ನೀಡಿದ್ದಾನೆ. ಲಾರಿ ಚಾಲಕನೋರ್ವ ತನಗೆ ಉಡುಪಿ ಯಲ್ಲಿ ಬಿಟ್ಟು ಹೋಗಿರುವುದಾಗಿ ಹೇಳಿಕೊಂಡಿದ್ದಾನೆ. ವಾರಸುದಾರರು ಜಿಲ್ಲಾಸ್ಪತ್ರೆಯ ಅಜ್ಜರಕಾಡು ಜಿಲ್ಲಾಸ್ಪತ್ರೆಯ ನಾಗರಿಕ ಸಹಾಯ ಕೇಂದ್ರ ಸಂಪರ್ಕಿಸುವಂತೆ ಕೋರಲಾಗಿದೆ.