ಸುಬ್ರಹ್ಮಣ್ಯ: ನದಿಯಲ್ಲಿ ಮುಳುಗಿ ಇಬ್ಬರು ಯುವಕರು ನೀರುಪಾಲು
ಸುಬ್ರಹ್ಮಣ್ಯ, ನ.15: ಮೀನು ಹಿಡಿಯಲೆಂದು ಕುಮಾರಧಾರಾ ನದಿಗೆ ಇಳಿದಿದ್ದ ಯುವಕರಿಬ್ಬರು ನೀರುಪಾಲಾಗಿರುವ ಘಟನೆ ಸುಬ್ರಹ್ಮಣ್ಯ ಠಾಣಾ ವ್ಯಾಪ್ತಿಯ ಗಗನಕಜೆ ಎಂಬಲ್ಲಿ ಬುಧವಾರ ಮುಸ್ಸಂಜೆ ನಡೆದಿದೆ.
ನೀರುಪಾಲಾದವರನ್ನು ದೇವಚಳ್ಳ ಗ್ರಾಮದ ದೇವರಕಾಡು ನಿವಾಸಿಗಳಾದ ರಕ್ಷಿತ್ ಮತ್ತು ಲತೀಶ್ ಗುರುತಿಸಲಾಗಿದೆ.
ರಕ್ಷಿತ್ ಮತ್ತು ಲತೀಶ್ ಇತರ ಮೂವರು ಸ್ನೇಹಿತರೊಂದಿಗೆ ಗಗನಕಜೆ ಎಂಬಲ್ಲಿ ಕುಮಾರಧಾರಾ ನದಿಯಿಂದ ಮೀನು ಹಿಡಿಯಲು ತೆರಳಿದ್ದರು. ಬೆಳಗ್ಗೆ ತೆರಳಿದ್ದ ಈ ಐವರು ಸಂಜೆಯವರೆಗೂ ಅಲ್ಲೇ ಇದ್ದರೆನ್ನಲಾಗಿದೆ. ಸಂಜೆಯ ವೇಳೆ ಹಿಂದಿರುಗುವ ಯತ್ನದಲ್ಲಿದ್ದಾಗ ಆಕಸ್ಮಿಕವಾಗಿ ಓರ್ವ ಕಾಲುಜಾರಿ ನೀರಿಗೆ ಬಿದ್ದನೆನ್ನಲಾಗಿದೆ. ಅವನನ್ನು ರಕ್ಷಿಸುವ ಭರದಲ್ಲಿ ಇನ್ನೋರ್ವ ಕೂಡಾ ಆತನೊಂದಿಗೆ ನೀರುಪಾಲಾದ ಎಂದು ಹೇಳಲಾಗುತ್ತಿದೆ.
ಘಟನಾ ಸ್ಥಳಕ್ಕೆ ಸುಬ್ರಹ್ಮಣ್ಯ ಠಾಣಾ ಪೊಲೀಸರು ಭೇಟಿ ನೀಡಿದ್ದು, ನದಿಯಲ್ಲಿ ನಾಪತ್ತೆಯಾಗಿರುವವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
Next Story