ಮನೆ ಬೀಗ ಮುರಿದು ಚಿನ್ನಾಭರಣ ಕಳವು
ಮಂಗಳೂರು, ನ.15: ಮನೆಯಲ್ಲಿ ಯಾರೂ ಇಲ್ಲದ ವೇಳೆ ಬೀಗ ಮುರಿದು ಒಳನುಗ್ಗಿದ ಕಳ್ಳರು ಸುಮಾರು 24,500 ರೂ. ವೌಲ್ಯದ ಚಿನ್ನಾಭರಣ ದೋಚಿದ ಬಗ್ಗೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರಿನಲ್ಲಿ ರೈಲ್ವೆ ಇಲಾಖೆಯಲ್ಲಿ ಕೀ ಮ್ಯಾನ್ಆಗಿ ಕೆಲಸ ಮಾಡುತ್ತಿರುವ ರಾಜಸ್ಥಾನದ ಮುನಿರಾಜ್ ಮೀನಾ ಮಂಗಳೂರು ರೈಲ್ವೆ ಜಂಕ್ಷನ್ ಬಳಿ ಇರುವ ವಸತಿಗೃಹದಲ್ಲಿ ಕುಟುಂಬ ಸಮೇತ ವಾಸವಿದ್ದಾರೆ. ದೀಪಾವಳಿ ಹಬ್ಬಕ್ಕಾಗಿ ನ.3ರಂದು ಕುಟುಂಬ ಸಮೇತ ಊರಿಗೆ ಹೋಗಿದ್ದರು. ನ.14ರಂದು ಮಂಗಳೂರಿಗೆ ಮರಳಿ ಬಂದಾಗ ಮನೆ ಕಳವಾಗಿರುವುದು ಗಮನಕ್ಕೆ ಬಂದಿದೆ.
ಮನೆಯ ಬಾಗಿಲಿನ ಬೀಗ ಮುರಿದಿದ್ದು, ಮನೆಯ ಒಳಗಡೆ ಹೋಗಿ ನೋಡಿದಾಗ ಸಾಮಾನುಗಳು ಚೆಲ್ಲಾಪಿಲ್ಲಿಯಾಗಿರುವುದು ಕಂಡುಬಂದಿದೆ. ಬೆಡ್ ರೂಮಿಗೆ ಹೋಗಿ ನೋಡಿದಾಗ ಒಳಗಡೆ ಇರಿಸಿದ್ದ ಸೂಟ್ಕೇಸ್ ತೆರೆದಿದ್ದು, ನೋಡಿದಾಗ ಅದರಲ್ಲಿ ಇರಿಸಿದ್ದ ಸುಮಾರು 20 ಗ್ರಾಂ ತೂಕದ ಹಳೇಯ ಚಿನ್ನದ ಸ್ಟಾರ್ ಡಿಸೈನ್ ಬಳೆಗಳು-2 ಮತ್ತು ಸುಮಾರು 16 ಗ್ರಾಂ ತೂಕದ ಬೆಳ್ಳಿಯ ಒಂದು ಜತೆ ಗೆಜ್ಜೆ ಕಳವಾಗಿರುವುದು ಗಮನಕ್ಕೆ ಬಂದಿದೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಕಂಕನಾಡಿ ನಗರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.