ಗುತ್ತಿಗೆ ಕಾರ್ಮಿಕರಿಂದ ವೆನ್ಲಾಕ್ ಆಸ್ಪತ್ರೆಯ ಮುಂದೆ ಧರಣಿ
ಮಂಗಳೂರು, ನ.16: ಜಿಲ್ಲಾ ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ದುಡಿಯುತ್ತಿರುವ ಗುತ್ತಿಗೆ ಕಾರ್ಮಿಕರನ್ನು ವಿನಾಃ ಕಾರಣ ಕೆಲಸ ನಿರಾಕರಣೆ ಮಾಡಿದ ಸಾಯಿ ಸೆಕ್ಯುರಿಟೀಸ್ ಸಂಸ್ಥೆಯ ವಿರುದ್ಧ ಮತ್ತು ಕಾರ್ಮಿಕರನ್ನು ಗುಲಾಮರಂತೆ ದುಡಿಸಿಕೊಳ್ಳುವ ಜಿಲ್ಲಾ ಅಧೀಕ್ಷಕರ ಕಾರ್ಮಿಕ ವಿರೋಧಿ ನೀತಿಯನ್ನು ಖಂಡಿಸಿ ಶುಕ್ರವಾರ ಸಿಐಟಿಯು ನೇತೃತ್ವದಲ್ಲಿ ಸರಕಾರಿ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಮುಂದೆ ಧರಣಿ ಸತ್ಯಾಗ್ರಹ ನಡೆಸಲಾಯಿತು.
ಕೆಲಸದಿಂದ ನಿರಾಕರಿಸಲ್ಪಟ್ಟ 10 ಮಂದಿ ಕಾರ್ಮಿಕರು ಹಾಗೂ ಸಿಐಟಿಯು ಕಾರ್ಯಕರ್ತರು ಸೇರಿ ನಡೆಸಿದ ಧರಣಿ ಸತ್ಯಾಗ್ರಹವನ್ನು ಉದ್ಘಾಟಿಸಿ ಮಾತನಾಡಿದ ಸಿಐಟಿಯು ಮಂಗಳೂರು ನಗರ ಪ್ರಧಾನ ಕಾರ್ಯದರ್ಶಿ ಯೋಗೀಶ್ ಜಪ್ಪಿನಮೊಗರು ಗುತ್ತಿಗೆ ಆಧಾರದ ಕಾರ್ಮಿಕರನ್ನು ಯಾವುದೇ ಮುನ್ಸೂಚನೆ ನೀಡದೆ ವಿನಾಃ ಕಾರಣ ಕೆಲಸದಿಂದ ವಜಾ ಮಾಡಿರುವುದು ಖಂಡನೀಯ.ಆಸ್ಪತ್ರೆಯ ಒಳಗಡೆ ಅಕ್ರಮವಾಗಿ ಹಾಗೂ ದುರಾಹಂಕಾರದಿಂದ ವರ್ತಿಸುವ ಸಾಯಿ ಸೆಕ್ಯುರಿಟಿ ಸಂಸ್ಥೆ ಹಾಗೂ ಕಾರ್ಮಿಕರನ್ನು ಹೀನಾಯವಾಗಿ ನಡೆಸಿಕೊಂಡು ಸರ್ವಾಧಿಕಾರಿಯಂತೆ ವರ್ತಿಸುವ ಜಿಲ್ಲಾ ಅಧೀಕ್ಷಕಿ ಇಲ್ಲಿ ನಡೆಯುವ ಎಲ್ಲಾ ಅಕ್ರಮ ಅವ್ಯವಹಾರಗಳಿಗೆ ಕಾರಣವಾಗಿರುವುದರಿಂದ ಸಮಗ್ರ ತನಿಖೆಯಾಗಬೇಕಾಗಿದೆ ಎಂದರಲ್ಲದೆ, ಕಾರ್ಮಿಕರ ಮರು ನೇಮಕವಾಗುವವರೆಗೂ ನಿರಂತರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಿಐಟಿಯು ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್ ಮಾತನಾಡಿ ಕಾರ್ಮಿಕರ ಹೋರಾಟವನ್ನು ಮುರಿಯಲು ಸಾಯಿ ಸೆಕ್ಯುರಿಟಿ ಸಂಸ್ಥೆ ಹಾಗೂ ಜಿಲ್ಲಾ ಅಧೀಕ್ಷಕರು ಪೊಲೀಸರನ್ನು ಛೂ ಬಿಟ್ಟು ನಡೆಸಿದ ಕುತಂತ್ರಗಳನ್ನು ಖಂಡಿಸಿದರು.
ಧರಣಿಯನ್ನು ಬೆಂಬಲಿಸಿ ಸಿಐಟಿಯು ಜಿಲ್ಲಾ ನಾಯಕರಾದ ಜಯಂತ ನಾಯಕ್, ಡಿವೈಎಫ್ಐ ಜಿಲ್ಲಾ ನಾಯಕರಾದ ಬಿ.ಕೆ.ಇಮ್ತಿಯಾಝ್, ನವೀನ್ ಕೊಂಚಾಡಿ,ಕಟ್ಟಡ ಕಾರ್ಮಿಕರ ಸಂಘಟನೆಯ ಜಿಲ್ಲಾ ನಾಯಕರಾದ ದಿನೇಶ್ ಶೆಟ್ಟಿ, ವಸಂತ, ದಲಿತ ಹಕ್ಕುಗಳ ಸಮಿತಿಯ ಜಿಲ್ಲಾ ನಾಯಕ ತಿಮ್ಮಯ್ಯ ಕೊಂಚಾಡಿ,ಆಟೋರಿಕ್ಷಾ ಚಾಲಕರ ಸಂಘಟನೆಯ ಸ್ಟಾನ್ಲಿ ನೊರೊನ್ಹಾ, ಸುಜಾತ ಸುವರ್ಣ ಮತ್ತಿತರರು ಪಾಲ್ಗೊಂಡಿದ್ದರು.