ಹರಿಕೃಷ್ಣ ಬಂಟ್ವಾಳ ತಮ್ಮ ಅತೀಯಾದ ಮಾತಿನಿಂದ ಸಮಾಜಕ್ಕೆ ಅಪಾಯಕಾರಿ : ರಮಾನಾಥ ರೈ
ಬಂಟ್ವಾಳ, ನ. 16: ಸಕ್ಕರೆ ಇಲ್ಲದ ಚಹಾ ಆರೋಗ್ಯಕ್ಕೆ ಒಳ್ಳೆಯದು. ಇತ್ತೀಚಿನ ದಿನಗಳಲ್ಲಿ ಉತ್ತಮ ಆರೋಗ್ಯಕ್ಕಾಗಿ ಸಕ್ಕರೆ ಇಲ್ಲದ ಚಹಾವನ್ನೇ ಜನರು ಇಷ್ಟಪಡುತ್ತಾರೆ. ಆದರೆ, ಸಕ್ಕರೆ ಅತಿಯಾದರೆ ಅದು ಜೀವಕ್ಕೆ ಅಪಾಯ. ಅದೇ ರೀತಿ ಅತೀಯಾದ ಮಾತು ಕೂಡ ಒಳ್ಳೆಯದಲ್ಲ, ಹರಿಕೃಷ್ಣ ಬಂಟ್ವಾಳ ತಮ್ಮ ಅತೀಯಾದ ಮಾತಿನಿಂದ ಸಮಾಜಕ್ಕೆ ಅಪಾಯಕಾರಿಯಾಗಿದ್ದಾರೆ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ತಿರುಗೇಟು ನೀಡಿದ್ದಾರೆ.
ರಮನಾಥ ರೈ ಸಕ್ಕರೆ ಇಲ್ಲದ ಚಹಾ ಎಂದು ಬಿಜೆಪಿ ಜಿಲ್ಲಾ ವಕ್ತಾರ ಹರಿಕೃಷ್ಣ ಬಂಟ್ವಾಳ ಅವರ ಟೀಕೆಗೆ ಬಂಟ್ವಾಳದ ನಂದಾವರದಲ್ಲಿ ಸುದ್ದಿಗಾರರ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು.
ಸಂಸದ ನಳಿನ್ ಕುಮಾರ್ ಕಟೀಲ್ ಅವರ ಸ್ವಯಂಘೋಷಿತ ಪುರೋಹಿತನಂತಿರುವ ಹರಿಕೃಷ್ಣ ಬಂಟ್ವಾಳ್ ಟೀಕೆಗಳಿಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ, ನಳೀನ್ ಕುಮಾರ್ ಕಟೀಲ್ ಬಗ್ಗೆ ಮಾತನಾಡಿದರೆ ಪ್ರತಿಭಟನೆ ನಡೆಸುವುದಾಗಿ ಹೇಳಿದ್ದಾರೆ, ನಾನೇನು ಬಳೆ ಹಾಕಿ ಕೂತಿಲ್ಲ ಎಂದು ಪ್ರತಿಕ್ರಿಯಿಸಿದ ಅವರು ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಅತೀ ಹೆಚ್ಚು ಹಕ್ಕುಪತ್ರಗಳನ್ನು ನಾನು ಸಚಿವನಾಗಿದ್ದಾಗ ನೀಡಿದ್ದೇನೆ. ಹರಿಕೃಷ್ಣ ಬಂಟ್ವಾಳ ಈ ಹಿಂದೆ ಕಾಂಗ್ರೆಸ್ನಲ್ಲಿದ್ದಾಗಲೂ ಪಕ್ಷ ವಿರೋಧಿ ಚಟುವಟಿಕೆ ಮಾಡಿ ನನ್ನನ್ನು ಸೋಲಿಸಲು ಪ್ರಯತ್ನ ಮಾಡಿದವರು, ಆದ್ದರಿಂದ ಅವರ ಟೀಕೆಗಳಿಗೆ ಮಹತ್ವ ಕೊಡುವ ಪ್ರಶ್ನೆಯೇ ಇಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.