ಉದ್ಯಾವರ: ಯುಎಫ್ಸಿ ಮಕ್ಕಳ ಹಬ್ಬ ಉದ್ಘಾಟನೆ
ಉದ್ಯಾವರ, ನ.17: ಮಕ್ಕಳಲ್ಲಿ ಸುಪ್ತವಾಗಿ ಹುದುಗಿರುವ ಪ್ರತಿಭೆಯನ್ನು ಹೆತ್ತವರು ಮತ್ತು ಶಿಕ್ಷಕರು ಗುರುತಿಸಿ ಪ್ರೋತ್ಸಾಹಿಸಿದಾಗ ಮಾತ್ರ ಪ್ರತಿಭೆ ಹೊರ ಜಗತ್ತಿಗೆ ಅನಾವರಣ ಗೊಳ್ಳಲು ಸಾದ್ಯ. ಹೀಗಾಗಿ ಮಕ್ಕಳ ಪ್ರತಿಭೆಯನ್ನು ಗುರುತಿಸುವ ಕೆಲಸವನ್ನು ಮನೆಯವರು ಮತ್ತು ಶಿಕ್ಷಕರು ಮಾಡಬೇಕಾಗಿದೆ ಎಂದು ಯೋಗದಲ್ಲಿ ಗಿನ್ನಿಸ್ ದಾಖಲೆ ಮಾಡಿರುವ ತನುಶ್ರೀ ಪಿತೊ್ರೀಡಿ ಹೇಳಿದ್ದಾರೆ.
ಪಂಡಿತ್ ನೆಹರೂ ಅವರ ಜನ್ಮದಿನದ ಹಿನ್ನಲೆಯಲ್ಲಿ ಮಕ್ಕಳ ದಿನಾಚರಣೆಯ ಪ್ರಯುಕ್ತ ಉದ್ಯಾವರದ ಉದ್ಯಾವರ ಫ್ರೆಂಡ್ಸ್ ಸರ್ಕಲ್ ವತಿಯಿಂದ ಶ್ರೀ ವಿಟೋಬ ರುಖುಮಾಯಿ ನಾರಾಯಣ ಗುರು ಮಂದಿರದಲ್ಲಿ ಶನಿವಾರ ಹಮ್ಮಿಕೊಳ್ಳಲಾದ ಉಡುಪಿ ಜಿಲ್ಲಾ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಮಕ್ಕಳ ಸಾಮೂಹಿಕ ನೃತ್ಯ ಸ್ಪರ್ಧೆ ‘ಯುಎಫ್ಸಿ ಮಕ್ಕಳ ಹಬ್ಬ-_2018’ನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಅಧ್ಯಕ್ಷತೆ ವಹಿಸಿದ್ದ ಕಾರ್ಕಳ ಭುವನೇಂದ್ರ ಕಾಲೇಜಿನ ಪ್ರಾಶುಂಪಾಲ ಡಾ. ಮಂಜುನಾಥ ಕೋಟ್ಯಾನ್ ಮಾತನಾಡಿ, ಶಿಕ್ಷಣ ಸಂಸ್ಥೆಗಳು ಕಲಿಕೆಯ ದೇವಸ್ಥಾನ ಗಳು ಎಂದು ನೆಹರೂ ಹೇಳಿದ್ದಾರೆ. ಎಲ್ಲಿ ಕಲಿಕೆ ಇರುತ್ತೊ ಅಲ್ಲಿ ದೇವರು ಇರುತ್ತಾನೆ. ಆ ನಿಟ್ಟಿನಲ್ಲಿ ಇಂಥ ಕಾರ್ಯಕ್ರಮ ಕೂಡಾ ಒಂದು ಕಲಿಕಾ ಪ್ರಕ್ರಿಯೆ ಎಂದರು.
ಶಂಕರಪುರ ಸೈಂಟ್ ಜೋನ್ಸ್ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಭಾಗ್ಯಲಕ್ಷ್ಮಿ ಹಾಗೂ ಉಡುಪಿ ನ್ಯಾಯವಾದಿ ಹಬೀಬ್ ಆಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಕಲರ್ ಸೂಪರ್ ವಾಹಿನಿಯ ಕನ್ನಡ ಕೋಗಿಲೆ ಸಂಗೀತ ರಿಯಾಲಿಟಿ ಶೋನ ಪ್ರತಿಭೆ ಲಿಖಿತ್ ಉಮೇಶ್ ಕರ್ಕೆರ ಹಾಗೂ ತನುಶ್ರೀ ಪಿತ್ರೋಡಿ ಇವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ನಿರ್ದೇಶಕರಾದ ಶರತ್ ಕುಮಾರ್, ಚಂದ್ರಾವತಿ ಭಂಡಾರಿ, ಯು.ಪದ್ಮನಾ ಕಾಮತ್, ಉಪಾದ್ಯಕ್ಷ ಲೋಕನಾಥ್ ಬೊಳ್ಜೆ, ಕೋಶಾಧಿಕಾರಿ ಸೋಮಶೇಖರ್ ಸುರತ್ಕಲ್ ಉಪಸ್ಥಿತರಿದ್ದರು.
ಅಧ್ಯಕ್ಷ ತಿಲಕ್ರಾಜ್ ಸಾಲ್ಯಾನ್ ಸಾಗತಿಸಿ, ನಿರ್ದೇಶಕ ಉದ್ಯಾವರ ನಾಗೇಶ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.ಪ್ರಧಾನ ಕಾರ್ಯದರ್ಶಿ ಗಿರೀಶ್ ಗುಡ್ಡೆಯಂಗಡಿ ವಂದಿಸಿದರು.