ಉಡುಪಿಗೆ ರಂಗಮಂದಿರ, ರಂಗಾಯಣ ಮಂಜೂರು: ಸಚಿವೆ ಜಯಮಾಲಾರಿಂದ ಸ್ಥಳ ಪರಿಶೀಲನೆ
ಉಡುಪಿ, ನ.21: ಉಡುಪಿ ಜಿಲ್ಲೆಗೆ ಮಂಜೂರಾಗಿರುವ ರಂಗಮಂದಿರ ಹಾಗೂ ರಂಗಾಯಣ ನಿರ್ಮಾಣಕ್ಕಾಗಿ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಜಯಮಾಲಾ ಇಂದು ನಗರದ ಆದಿಉಡುಪಿಯಲ್ಲಿ ಸ್ಥಳ ಪರಿಶೀಲನೆ ನಡೆಸಿದರು.
ಆದಿಉಡುಪಿಯ ಎಪಿಎಂಸಿ ಪಕ್ಕದಲ್ಲಿ ಈಗಾಗಲೇ ಗುರುತಿಸಲಾಗಿರುವ ಸುಮಾರು 1.37 ಎಕರೆ ಜಾಗವನ್ನು ಪರಿಶೀಲಿಸಿದ ಸಚಿವರು, ರಂಗಮಂದಿರ ಹಾಗೂ ರಂಗಾಯಣ ನಿರ್ಮಾಣಕ್ಕಾಗಿ ಡಿಸೆಂಬರ್ ತಿಂಗಳಲ್ಲಿ ಶಿಲಾನ್ಯಾಸ ನೆರವೇರಿಸಲಾಗುವುದು ಎಂದು ತಿಳಿಸಿದರು.
ರಂಗಮಂದಿರ ಹಾಗೂ ರಂಗಾಯಣದ ಪ್ರಾರಂಭಕ್ಕೆ ಒಟ್ಟು ಏಳು ಕೋಟಿ ರೂ. ಹಣವಿದ್ದು, ಈಗಾಗಲೇ ಎರಡು ಕೋಟಿ ರೂ.ಬಿಡುಗಡೆಯಾಗಿದೆ. ಶೀಘ್ರವೇ ನಿರ್ಮಾಣ ಕಾಮಗಾರಿಯನ್ನು ಪ್ರಾರಂಭಿಸಲಾಗುವುು ಎಂದವರು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಆರ್.ಚಂದ್ರಶೇಖರ್, ಪೂರ್ಣಿಮಾ, ಉಡುಪಿ ತಹಶೀಲ್ದಾರ್ ಪ್ರದೀಪ್ ಕುರ್ಡೆಕರ್, ಜಿಪಂ ಸದಸ್ಯ ಜನಾರ್ದನ ತೋನ್ಸೆ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಜಿ.ಎ.ಬಾವ ಮೊದಲಾದವರು ಉಪಸ್ಥಿತರಿದ್ದರು.