ಅಂಬೇಡ್ಕರ್ ಯುವಶಕ್ತಿಯ ಹೊಸ ಐಕಾನ್: ಜಯನ್ ಮಲ್ಪೆ
ಮಲ್ಪೆ, ಡಿ. 6: ಇಂದು ಹೊಸದಿಲ್ಲಿ ಜೆಎನ್ಯುನ ಪ್ರಗತಿಪರ ವಿದ್ಯಾರ್ಥಿ ಗಳು, ಬಲಪಂಥೀಯ ವಿದ್ಯಾರ್ಥಿಗಳು, ಎಡಪಂರ್ಥಿಯ ವಿದ್ಯಾರ್ಥಿಗಳು ಅಂಬೇಡ್ಕರ್ ಜಿಂದಾಬಾದ್ ಎನ್ನುತ್ತಿದ್ದಾರೆ. ಈಗ ಈ ಎರಡು ಸಿದ್ದಾಂತಗಳೂ ಅಂಬೇಡ್ಕರರ ಪ್ರಬುದ್ಧ ಭಾರತವನ್ನು ಕಟ್ಟಲು ಪ್ರಯತ್ನಿಸುವ ಮೂಲಕ ಅಂಬೇಡ್ಕರ್ ಈ ದೇಶದ ಯುವಶಕ್ತಿಯ ಹೊಸ ಐಕಾನ್ ಆಗುತ್ತಿದ್ದಾರೆ ಎಂದು ದಲಿತ ಚಿಂತಕ ಜಯನ್ ಮಲ್ಪೆ ಹೇಳಿದ್ದಾರೆ.
ಮಲ್ಪೆಯಲ್ಲಿ ಅಂಬೇಡ್ಕರ್ ಯುವಸೇನೆ ಏರ್ಪಡಿಸಿದ ಡಾ.ಬಾಬಾ ಸಾಹೇಬ ಅಂಬೇಡ್ಕರರ 62ನೇ ಮಹಾ ಪರನಿರ್ವಾಣ ದಿನಾಚರಣೆಯ ಕಾರ್ಯಕ್ರಮ ದಲ್ಲಿ ಭಾವಹಿಸಿ ಅವರು ಮಾತನಾಡುತಿದ್ದರು.
ಅಂಬೇಡ್ಕರ್ ನಂತರ ದಲಿತರು ಸಾಮುದಾಯಿಕ, ಸಾಮಾಜಿಕ ಹಾಗೂ ರಾಜಕೀಯ ನಾಯಕತ್ವವನ್ನು ಗುರುತಿಸಿಕೊಳ್ಳುವಲ್ಲಿ ಸೋತಿದ್ದಾರೆ. ಈ ದುರಂತಕ್ಕೆ ದಲಿತರೇ ಹೊಣೆಗಾರರು ಎನ್ನಬಹುದು. ಪರಸ್ಪರ ದಲಿತ ಸಂಘಟನೆಗಳು, ರಾಜಕಾರಣಿಗಳು, ಹೋರಾಟಗಾರರು, ನೌಕರರು, ಅಧಿಕಾರಿಗಳು, ವಿದ್ಯಾರ್ಥಿ ಗಳ ನಡುವೆ ಸಾಧ್ಯವಾಗದ ಸಾಮರಸ್ಯದ ಸಂಬಂಧ, ದಲಿತ ಸಮುದಾಯದ ಬಹುತೇಕ ಕೇಡಿಗೆ ಕಾರಣವಾಗಿದೆ ಎಂದವರು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಂಬೇಡ್ಕರ್ ಯುವಸೇನೆಯ ಅಧ್ಯಕ್ಷ ಹರೀಶ್ ಸಾಲ್ಯಾನ್ ವಹಿಸಿದ್ದರು. ಮುಖ್ಯ ಅಥಿತಿಯಾಗಿ ದಸಂಸದ ಉಡುಪಿ ತಾಲೂಕು ಸಂಚಾಲಕ ಮಹಾಲಿಂಗ ಕೋಟ್ಯಾನ್ ಮಾತನಾಡಿ, ದಲಿತ ನಾಯಕ ರು ತಮ್ಮ ಭಿನ್ನಾಬಿಪ್ರಾಯ ಬಿಟ್ಟು ದಲಿತ ಸಮಾಜಕ್ಕಾಗಿ ಒಂದಾಗಬೇಕಾಗಿದೆ ಎಂದರು.
ದಲಿತ ಮುಖಂಡರಾದ ಸುಂದರ್ ಕಪ್ಪೆಟ್ಟು, ಗಣೇಶ್ ನೆರ್ಗಿ, ಸಂದ್ಯಾ ತಿಲಕ್ ರಾಜ್ ಮುಂತಾದವರು ಮಾತನಾಡಿದರು. ದಲಿತ ನಾಯಕರಾದ ಸುರೇಶ್ ಪಾಲನ್ ತೊಟ್ಟಂ, ಶಶಿಕಲ ತೊಟ್ಟಂ, ದಿನೇಶ್ ಮೂಡಬೆಟ್ಟು, ಮಂಜುನಾಥ ಕಪ್ಪಟ್ಟು, ಸುಶೀಲ್ ಕುಮಾರ್ ಕೊಡವೂರು, ಮೋಹನ್ದಾಸ್ ಮಲ್ಪೆ, ಶಶಿಕುಮಾರ್ ಮಂಡ್ಯ, ಪ್ರಸಾದ್ ಮಲ್ಪೆಮುಂತಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮಲ್ಪೆ, ನೆರ್ಗಿ, ತೊಟ್ಟಂ, ಬಲರಾಮ ನಗರದ ನೂರಾರು ಮಂದಿ ಅಂಬೇಡ್ಕರ್ ಭಾವಚಿತ್ರಕ್ಕೆ ಹೂವು ಹಾರಹಾಕಿ ಗೌರವ ಸಲ್ಲಿಸಿದರು. ಅಂಬೇಡ್ಕರ್ ಯುವಸೇನೆಯ ಭಗವಾನ್ದಾಸ್ ನೆರ್ಗಿ ಸ್ವಾಗತಿಸಿ, ಕವಿತ ವಂದಿಸಿದರು.