ಮೂಡುಬಿದಿರೆ: ಪತ್ನಿಗೆ ಮಾರಣಾಂತಿಕ ಹಲ್ಲೆ ನಡೆಸಿ ಆತ್ಮಹತ್ಯೆಗೆ ಯತ್ನ
ಮೂಡುಬಿದಿರೆ, ಡಿ. 7: ಪತ್ನಿಯ ಬಲಗೈಗೆ ಕತ್ತಿಯಿಂದ ಕಡಿದು ಹಲ್ಲೆ ನಡೆಸಿ ಬಳಿಕ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯೋರ್ವ ಸ್ಥಳೀಯರ ನೆರವಿನಿಂದ ರಕ್ಷಿಸಲ್ಪಟ್ಟ ಪ್ರಕರಣ ಪಡುಮಾರ್ನಾಡಿನಲ್ಲಿ ಶುಕ್ರವಾರ ನಡೆದಿದೆ.
ಆರೋಪಿ ಕುಪ್ಪೆಪದವಿನ ರವಿರಾಜ್ ಶೆಟ್ಟಿ ತನ್ನ ಪತ್ನಿ ಸೌಮ್ಯ ಶೆಟ್ಟಿ(29) ಅವರ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿ, ಗಂಭೀರವಾಗಿ ಗಾಯಗೊಂಡ ಸೌಮ್ಯ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು.
ರವಿರಾಜ್ ಹೊಟೆಲ್ ಉದ್ಯೋಗಿಯಾಗಿದ್ದು ಸೌಮ್ಯ ಸಾಣೂರಿನ ಶಾಲೆಯೊಂದರಲ್ಲಿ ಶಿಕ್ಷಕಿ. ಮದುವೆಯಾದ ಕೆಲವೇ ತಿಂಗಳಲ್ಲಿ ದಂಪತಿ ಮಧ್ಯೆ ವೈಮನಸ್ಸಿನ ಕಾರಣಕ್ಕೆ ಪತಿಯಿಂದ ದೂರವಾಗಲು ಯತ್ನಿಸಿದ ಸೌಮ್ಯ ಬಳಿಕ ತನ್ನ ತವರು ಮನೆಗೆ ಬಂದು ಉಳಿದುಕೊಂಡಿದ್ದರೆನ್ನಲಾಗಿದೆ. ಸೌಮ್ಯ ಪಡುಮಾರ್ನಾಡಿನಲ್ಲಿ ಶಾಲೆಗೆ ಹೋಗಲು ಬಸ್ಸಿಗಾಗಿ ಕಾದು ನಿಂತಲ್ಲಿಗೆ ರವಿರಾಜ್ ಬಂದು ಹಲ್ಲೆ ನಡೆಸಿದ್ದಾನೆ. ಘಟನೆ ಕಂಡು ಅಕ್ಕಪಕ್ಕದವರು ಧಾವಿಸಿ ಬಂದಾಗ ಆರೋಪಿ ಅಲ್ಲಿಂದ ಪರಾರಿಯಾಗಿ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಸುದ್ದಿ ತಿಳಿದು ಸ್ಥಳೀಯರು ರವಿರಾಜ್ ನನ್ನು ರಕ್ಷಿಸಿದ್ದಾರೆ. ಈ ಬಗ್ಗೆ ಇಲ್ಲಿನ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.