ಕುಂದಾಪುರ ಸರಕಾರಿ ಆಸ್ಪತ್ರೆಗೆ ಲೋಕಾಯುಕ್ತ ದಿಢೀರ್ ಭೇಟಿ
ಕುಂದಾಪುರ, ಡಿ.8: ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಪಿ.ವಿಶ್ವ ನಾಥ ಶೆಟ್ಟಿ ಶನಿವಾರ ಕುಂದಾಪುರ ಸರಕಾರಿ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಆಸ್ಪತ್ರೆಯ ವಿವಿಧ ವಿಭಾಗಗಳಿಗೆ ತೆರಳಿ ಪರಿಶೀಲನೆ ನಡೆಸಿದ ಲೋಕಾ ಯುಕ್ತರು, ಆಸ್ಪತ್ರೆಯ ಸಮಸ್ಯೆಗಳ ಬಗ್ಗೆ ವೈದ್ಯರೊಂದಿಗೆ ಚರ್ಚಿಸಿದರು. ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರೋಹಿಣಿ, ತಾಲೂಕು ಆರೋಗ್ಯಾಧಿಕಾರಿ ಡಾ.ನಾಗಭೂಷಣ ಉಡುಪ, ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ರಾಬರ್ಟ್ ರೆಬೆಲ್ಲೊ, ವೈದ್ಯರಾದ ಡಾ.ಉದಯ್ಶಂಕರ, ಡಾ. ಚಂದ್ರಶೇಖರ, ಡಾ.ಶಿವಕುಮಾರ ಹಾಜರಿದ್ದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಲೋಕಾಯುಕ್ತರು, ಕುಂದಾ ಪುರದ ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಇಲ್ಲಿನ ವೈದ್ಯರು ಹಾಗೂ ಸಿಬ್ಬಂದಿಗಳು ಉತ್ತಮ ಸೇವೆ ನೀಡುತ್ತಿದ್ದಾರೆನ್ನುವುದು ಮೇಲ್ನೋಟಕ್ಕೆ ತಿಳಿದುಬರುತ್ತದೆ. ಈ ಆಸ್ಪತ್ರೆಯಲ್ಲಿರುವ ಯಾವುದೇ ಕುಂದು ಕೊರತೆ, ಸಮಸ್ಯೆ ಗಳನ್ನು ಲೋಕಾಯುಕ್ತರ ಗಮನಕ್ಕೆ ತಂದರೆ, ಪರಿಶೀಲಿಸಿ ಸರಿಪಡಿಸುವ ಪ್ರಯತ್ನ ಮಾಡಲಾಗುವುದು ಎಂದರು.
ಬಡವರು ಹಾಗೂ ಮಧ್ಯಮ ವರ್ಗದವರು ಸರಕಾರಿ ಆಸ್ಪತ್ರೆಗಳನ್ನೇ ಹೆಚ್ಚಾಗಿ ಅವಲಂಬಿಸಿರುವುದರಿಂದ ಇಲ್ಲಿರುವ ಸಮಸ್ಯೆ ಹಾಗೂ ತೊಂದರೆಗಳನ್ನು ತಿಳಿದು ಸುಧಾರಣೆ ಮಾಡಬೇಕಾಗಿದೆ. ಆ ಮೂಲಕ ಆಸ್ಪತ್ರೆಗಳನ್ನು ಹೆಚ್ಚು ಬಲಪಡಿಸ ಬೇಕಾದ ಅಗತ್ಯ ಇದೆ ಎಂದು ಲೋಕಾಯುಕ್ತರು ಹೇಳಿದರು.
ಸರಕಾರಿ ಆಸ್ಪತ್ರೆಗಳಲ್ಲಿ ರೋಗಿಗಳು ತುಂಬಿದ್ದರೆ ಆ ಪರಿಸರದಲ್ಲಿ ಕಾಯಿಲೆ ಇದೆ ಹಾಗೂ ರೋಗಿಗಳ ಸಂಖ್ಯೆ ಹೆಚ್ಚಾಗಿದ್ದರೆ ಆ ಆಸ್ಪತ್ರೆಯಲ್ಲಿ ಉತ್ತಮ ವೈದ್ಯ ರಿದ್ದಾರೆಂಬುದು ಅರ್ಥ. ಒಳ್ಳೆಯ ವ್ಯವಸ್ಥೆಗಳಿರುವ ಆಸ್ಪತ್ರೆಗಳಿಗೆ ರೋಗಿಗಳು ರೋಗ ಗುಣವಾಗುವ ವಿಶ್ವಾಸದಿಂದ ಬರುತ್ತಾರೆ. ಆದುದರಿಂದ ರೋಗಿಗಳ ಬಗ್ಗೆ ಸರಿಯಾದ ಗಮನ ಹರಿಸಿ ಉತ್ತಮ ಸೇವೆ ನೀಡಬೇಕಾಗಿದೆ ಎಂದರು.