ಸರಕಾರಿ ಹುದ್ದೆಗಾಗಿ ವಿಕಲಚೇತನನಿಂದ ಧರಣಿ: ಎಂಟನೆ ದಿನಕ್ಕೆ
ಉಡುಪಿ, ಡಿ.18: ವಿಕಲಚೇತನ ಆಧಾರದಡಿ ಅಥವಾ ಮೆಸ್ಕಾಂ ಕರ್ತವ್ಯ ದಲ್ಲಿ ತಮ್ಮ ಮೃತಪಟ್ಟ ಅನುಕಂಪದ ಆಧಾರದಲ್ಲಿ ಸರಕಾರಿ ಹುದ್ದೆ ನೀಡುವಂತೆ ವಡ್ಡರ್ಸೆ ಗ್ರಾಮದ ಎಂ.ಜಿ.ಕಾಲೋನಿಯ ದೇವೇಂದ್ರ ಸುವರ್ಣ ಜಿಲ್ಲಾಧಿಕಾರಿ ಕಚೇರಿ ಎದುರು ಏಕಾಂಗಿಯಾಗಿ ನಡೆಸುತ್ತಿರುವ ಧರಣಿಯು ಮಂಗಳವಾರ ಎಂಟನೆ ದಿನಕ್ಕೆ ಕಾಲಿರಿಸಿದೆ.
ಡಿ.10ರಿಂದ ಧರಣಿ ಆರಂಭಿಸಿರುವ ದೇವೇಂದ್ರ ಸುವರ್ಣ, ಪ್ರತಿದಿನ ಬೆಳಗ್ಗೆ ಯಿಂದ ಸಂಜೆಯವರೆಗೆ ಜಿಲ್ಲಾಧಿಕಾರಿ ಕಚೇರಿ ಎದುರಿನ ಸತ್ಯಾಗ್ರಹ ಕಟ್ಟೆಯಲ್ಲಿ ಒಬ್ಬರೇ ಕುಳಿತು ಸರಕಾರದ ಗಮನ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ. ಕಳೆದ ಮೂರು ವರ್ಷಗಳಿಂದ ಸರಕಾರಿ ಹುದ್ದೆಗಾಗಿ ಪ್ರಯತ್ನ ನಡೆಸಿದರೂ ಈವರೆಗೆ ಯಾವುದೇ ಹುದ್ದೆ ದೊರೆಯದ ಹಿನ್ನೆಲೆಯಲ್ಲಿ ಅವರು ಈ ಧರಣಿ ಆರಂಭಿಸಿದ್ದಾರೆ.
‘ಡಿ.14ರಂದು ಸ್ಥಳಕ್ಕೆ ಆಗಮಿಸಿದ್ದ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ನನ್ನ ಅಹವಾಲು ಸ್ವೀಕರಿಸಿದ್ದು, ಅದನ್ನು ಸರಕಾರಕ್ಕೆ ಕಳುಹಿಸಿಕೊಡಲಾ ಗುವುದು ಎಂಬ ಭರವಸೆ ನೀಡಿ ಹೋಗಿದ್ದಾರೆ. ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ನನ್ನ ವಿಚಾರವನ್ನು ಸದನದಲ್ಲಿ ಪ್ರಸ್ತಾಪ ಮಾಡುವ ಆಶ್ವಾಸನೆ ನೀಡಿದ್ದಾರೆ. ನನ್ನ ಬಗ್ಗೆ ಸರಕಾರ ಯಾವುದಾದರೊಂದು ತೀರ್ಮಾನ ತೆಗೆದುಕೊಳ್ಳುವವರೆಗೆ ಹೋರಾಟ ಮುಂದುವರಿಯಲಿದೆ’ ಎಂದು ದೇವೇಂದ್ರ ಸುವರ್ಣ ತಿಳಿಸಿದ್ದಾರೆ.