ಬ್ರಹ್ಮಾವರ: ಕಿಶೋರ ಯಕ್ಷ ಸಂಭ್ರಮಕ್ಕೆ ಸಚಿವೆ ಜಯಮಾಲ ಚಾಲನೆ
ಬ್ರಹ್ಮಾವರ, ಡಿ. 23: ಶಾಲಾ ವಿದ್ಯಾರ್ಥಿಗಳು ಯಕ್ಷಗಾನವನ್ನು ಕಲಿತು ಪ್ರದರ್ಶನ ನೀಡುವಂತಹ ಮಟ್ಟಕ್ಕೆ ವಿದ್ಯಾರ್ಥಿಗಳನ್ನು ಬೆಳೆಸಿದ್ದೀರಿ. ನಿಮ್ಮ ಪ್ರಯತ್ನಗಳಿಗೆ ಸರಕಾರದ ಸಹಕಾರ ಸದಾ ಇರುತ್ತದೆ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಜಯಮಾಲಾ ಹೇಳಿದ್ದಾರೆ.
ಬ್ರಹ್ಮಾವರದ ಬಸ್ ನಿಲ್ದಾಣ ಬಳಿ ರವಿವಾರ ಯಕ್ಷ ಶಿಕ್ಷಣ ಟ್ರಸ್ಟ್ ಹಾಗೂ ಬ್ರಹ್ಮಾವರದ ಪ್ರದರ್ಶನ ಸಂಘಟನಾ ಸಮಿತಿ ಆಯೋಜಿಸಿದ ಕಿಶೋರ ಯಕ್ಷ ಸಂಭ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಯಕ್ಷಗಾನವನ್ನು ವಿದ್ಯಾರ್ಥಿಗಳು ಕಲಿಯುವುದರಿಂದ ಸಭಾ ಕಂಪನ ಹೋಗುತ್ತದೆ. ವ್ಯಕ್ತಿತ್ವ ವಿಕಸನ ಉಂಟಾಗುತ್ತದೆ. ಟ್ರಸ್ಟ್ ಈ ಮೂಲಕ ವಿದ್ಯಾರ್ಥಿ ಗಳ ಸರ್ವತೋಮುಖ ಅಭಿವೃದ್ಧಿಗೆ ಕಾರಣವಾಗುತ್ತಿದೆ ಎಂದು ಶ್ಲಾಘಿಸಿದರು. ಅಧ್ಯಕ್ಷತೆಯನ್ನು ಟ್ರಸ್ಟ್ ಕಾರ್ಯಾಧ್ಯಕ್ಷ ಶಾಸಕ ಕೆ.ರಘುಪತಿ ಭಟ್ ವಹಿಸಿದ್ದರು. ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಕಲೆಯ ಉಳಿವಿಗೆ ಟ್ರಸ್ಟ್ ನಡೆಸುತ್ತಿ ರುವ ಪ್ರಯತ್ನವನ್ನು ಪ್ರಶಂಸಿಸಿದರು. ಸಂಘಟನಾ ಸಮಿತಿ ಅಧ್ಯಕ್ಷ ರಾಜೇಶ್ ಶೆಟ್ಟಿ ಬಿರ್ತಿ ಸ್ವಾಗತಿಸಿ ವಂದಿಸಿದರು. ಟ್ರಸ್ಟ್ ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸ್ತಾವನೆ ಸಲ್ಲಿಸಿದರು.
ಉಡುಪಿ ಜಿಪಂನ ಮಾಜಿ ಅಧ್ಯಕ್ಷ ಬಿ.ಭುಜಂಗ ಶೆಟ್ಟಿ, ವಾರಂಬಳ್ಳಿ ಗ್ರಾಪಂ ಅಧ್ಯಕ್ಷ ನವೀನಚಂದ್ರ ನಾಯಕ್, ಉದ್ಯಮಿಗಳಾದ ಸುದರ್ಶನ ಹೆಗ್ಡೆ, ಪಿ. ಪ್ರವೀಣ್ ಶೆಟ್ಟಿ, ಯಕ್ಷಗಾನ ಕಲಾರಂಗದ ಅಧ್ಯಕ್ಷ ಕೆ.ಗಣೇಶ ರಾವ್ ಮೊದಲಾದವರು ಉಪಸ್ಥಿತರಿದ್ದರು.
ಡಿ.29ರವರೆಗೆ ಪ್ರತಿದಿನ ಎರಡರಂತೆ ಬ್ರಹ್ಮಾವರ ಪರಿಸರದ 13 ಪ್ರೌಢ ಶಾಲೆಗಳು ಒಟ್ಟು 14 ಪ್ರದರ್ಶನಗಳನ್ನು ನೀಡಲಿವೆ. ಪ್ರೌಢಶಾಲೆಗಳ ವಿದ್ಯಾರ್ಥಿ ಗಳಿಗೆ ಯಕ್ಷಗಾನವನ್ನು ಕಲಿಸಿ ಪ್ರದರ್ಶನ ಏರ್ಪಡಿಸುವ ಯೋಜೆ ಕಿಶೋರ ಯಕ್ಷ ಸಂಭ್ರಮವಾಗಿದೆ.