ದಿನಕ್ಕೆ 4 ಗಂಟೆ ಹೆಲಿಕಾಪ್ಟರ್ ನಲ್ಲಿ ಮೀನುಗಾರರಿಗಾಗಿ ಹುಡುಕಾಟ: ಸಚಿವೆ ಜಯಮಾಲ
ಮಹಾರಾಷ್ಟ್ರ, ಗೋವಾ, ಕೇರಳಗಳ ಜೊತೆ ಶೋಧಕಾರ್ಯ
ಉಡುಪಿ, ಜ.6: ನೀರಿನ ಜೊತೆ ಸಂಘರ್ಷಕ್ಕೆ ಇಳಿದು ಬದುಕನ್ನು ಕಟ್ಟಿ ಕೊಡುವ ಮೀನುಗಾರರನ್ನು ಯಾರು ಕೂಡ ನಿರ್ಲಕ್ಷ್ಯ ಮಾಡಲು ಸಾಧ್ಯವಿಲ್ಲ. ನಾಪತ್ತೆ ಪ್ರಕರಣ ದಾಖಲಾದ ಮರುದಿನ ಅಂದರೆ ಡಿ.23ರಿಂದ ಸರಕಾರ ಕಾರ್ಯಾಚರಣೆಯಿಂದ ಒಂದು ಚೂರು ಹಿಂದೆ ಸರಿದಿಲ್ಲ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಜಯಮಾಲ ಹೇಳಿದ್ದಾರೆ.
ಅಂಬಲಪಾಡಿ ಜಂಕ್ಷನ್ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಇಂದು ನಡೆದ ಮೀನುಗಾರರ ಪ್ರತಿಭಟನಾ ಸಭೆಗೆ ಆಗಮಿಸಿ ಮಲ್ಪೆ ಮೀನುಗಾರರ ಸಂಘದಿಂದ ಮನವಿ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು. ನಾಪತ್ತೆಯಾಗಿರುವ ಏಳು ಮಂದಿಯ ಜೊತೆ ಎಲ್ಲ ಮೀನುಗಾರರ ಭಾವನೆ ಇದೆ. ನಿಮ್ಮ ನೋವು ನಮಗೆ ಅರ್ಥ ಆಗುತ್ತದೆ. ಏಳು ಕುಟುಂಬದ ಜೊತೆ ಇಡೀ ಕರ್ನಾಟಕವೇ ಇದೆ ಎಂದರು.
ಮಹಾರಾಷ್ಟ್ರ, ಗೋವಾ, ಕೇರಳ ಎಲ್ಲ ಸರಕಾರಗಳ ಜೊತೆ ಸೇರಿ ಶೋಧ ಕಾರ್ಯ ಮಾಡುತ್ತಲೇ ಇದ್ದೇವೆ. ದಿನಕ್ಕೆ ನಾಲ್ಕು ಗಂಟೆಗಳ ಕಾಲ ಹೆಲಿಕಾಪ್ಟರ್ ನಲ್ಲಿ ಕುರುಹುಗಳಿಗಾಗಿ ಹುಡುಕಾಟ ಮಾಡುತ್ತಿದ್ದೇವೆ. ಏಳು ಜೀವಗಳು ಸುರಕ್ಷಿತ ವಾಗಿ ಬರುತ್ತದೆ ಎಂಬ ನಂಬಿಕೆಯಲ್ಲಿ ನಾನು ಕೂಡ ಇದ್ದೇನೆ. ಅವರನ್ನು ಹುಡುಕಿ ತರುವುದು ನಮ್ಮ ಜವಾಬ್ದಾರಿ. ಇದಕ್ಕೆ ಸರಕಾರ ಬದ್ಧವಾಗಿದೆ ಎಂದು ಅವರು ತಿಳಿಸಿದರು.
ಕೇಂದ್ರ ಹಾಗೂ ರಾಜ್ಯ ಸರಕಾರಗಳು ಎಲ್ಲ ಮೀನುಗಾರರನ್ನು ಜೀವಂತವಾಗಿ ವಾಪಸ್ ಕರೆತರುವ ಕೆಲಸ ಮಾಡಬೇಕಾಗಿದೆ. ಅದಕ್ಕಾಗಿ ಹೊಸ ತಂತ್ರಜ್ಞಾನವನ್ನು ಬಳಸಿಕೊಂಡಿದ್ದೇವೆ. ಈ ನಿಟ್ಟಿನಲ್ಲಿ ನೌಕಪಡೆ ಕೂಡ ಕೆಲಸ ಮಾಡುತ್ತಿದೆ. ಮುಖ್ಯಮಂತ್ರಿ ಮತ್ತೆ ಕೇಂದ್ರ ಸರಕಾರಕ್ಕೆ ಪತ್ರ ಬರೆದಿದ್ದಾರೆ. ನಾನು ಈ ಹಿಂದೆಯೇ ಪತ್ರ ಬರೆದು ಸೈನ್ಯದ ಮೂಲಕ ಮೀನುಗಾರರನ್ನು ಹುಡುಕಿ ಕೊಡಿ ಎಂದು ಮಾಡಿದ್ದೇನೆ ಎಂದು ಅವರು ಹೇಳಿದರು.
ಕೇಂದ್ರ ಸರಕಾರದ ನೆರವು ತೆಗೆದುಕೊಂಡು ರಾಜ್ಯ ಸರಕಾರ ಎಲ್ಲ ರೀತಿಯ ಕೆಲಸ ಮಾಡುತ್ತದೆ. ನಿಮ್ಮ ಭಾವನೆ ಜೊತೆ ಸರಕಾರ ಎಂದಿಗೂ ಇರುತ್ತದೆ. ರೈತರಿಗಿಂತ 100 ಪಟ್ಟು ಸಂಘರ್ಷ ಜೀವನ ನಡೆಸುವವರು ಮೀನುಗಾರರು. ನಾವು ಏಳು ಜೀವಗಳನ್ನು ಹುಡುಕಿ ತರುವ ಕೆಲಸವನ್ನು ನಾವು ಮಾಡುತ್ತೇವೆ. ಹೊಸ ತಂತ್ರಜ್ಞಾನ ಬಳಸಿಕೊಂಡಾದರೂ ನಾವು ಅವರನ್ನು ಹುಡುಕುತ್ತೇವೆ ಎಂದು ಸಚಿವೆ ಜಯಮಾಲ ಭರವಸೆ ನೀಡಿದರು.