ಪ್ರತಿಭಟನಾ ಮೆರವಣಿಗೆ: ಮಸೀದಿ, ಚರ್ಚ್ಗಳಿಂದ ತಂಪುಪಾನೀಯ, ನೀರಿನ ವ್ಯವಸ್ಥೆ
ಮಲ್ಪೆ, ಜ. 6: ನಾಪತ್ತೆಯಾಗಿರುವ ಮೀನುಗಾರರ ಪತ್ತೆ ಹಚ್ಚುವಂತೆ ಆಗ್ರಹಿಸಿ ಮಲ್ಪೆಯಿಂದ ಉಡುಪಿವರೆಗೆ ರವಿವಾರ ಹಮ್ಮಿಕೊಳ್ಳಲಾದ ಪ್ರತಿಭಟನಾ ಮೆರ ವಣಿಗೆಯಲ್ಲಿ ಪಾಲ್ಗೊಂಡವರಿಗೆ ದಾರಿಯಲ್ಲಿ ಮಸೀದಿ ಹಾಗೂ ಚರ್ಚ್ಗಳ ವತಿಯಿಂದ ಕುಡಿಯುವ ನೀರು ಹಾಗೂ ತಂಪು ಪಾನೀಯ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.
ಸುಡುವ ಬಿಸಿಲಿನಲ್ಲಿ ಸಾಗಿ ಬಂದ ಸಾವಿರಾರು ಸಂಖ್ಯೆಯ ಮೀನುಗಾರ ಬಾಂಧವರಿಗೆ ಆದಿಉಡುಪಿಯ ನೂರುಲ್ ಇಸ್ಲಾಮ್ ಜಾಮೀಯ ಮಸೀದಿ ವತಿಯಿಂದ ತಂಪು ಪಾನೀಯ ಹಾಗೂ ಮಲ್ಪೆಮದೀನ ಮಸೀದಿಯ ವತಿ ಯಿಂದ ಮತ್ತು ಕಲ್ಮಾಡಿ ಚರ್ಚ್ಗಳ ವತಿಯಿಂದ ಕುಡಿಯುವ ನೀರಿ ವ್ಯವಸ್ಥೆಯನ್ನು ಒದಗಿಸಲಾಯಿತು.
ಆದಿಉಡುಪಿ ಮಸೀದಿಯ ಮುಂದಿನ ರಸ್ತೆಯಲ್ಲಿ ಮೀನುಗಾರರ ಮೆರ ವಣಿಗೆ ಸಾಗುತ್ತಿದ್ದಂತೆ ಮಸೀದಿಯಲ್ಲಿ ನಾಪತ್ತೆಯಾಗಿರುವ ಮೀನುಗಾರರ ಸುರಕ್ಷಿತವಾಗಿ ವಾಪಸ್ಸಾಗಲಿ ಎಂದು ಧ್ವನಿವರ್ಧಕದ ಮೂಲಕ ಕನ್ನಡದಲ್ಲಿ ವಿಶೇಷ ಪ್ರಾರ್ಥನೆ ಮಾಡಲಾಯಿತು. ಈ ಸಂದರ್ಭ ಪ್ರಾರ್ಥನೆಗೆ ಸ್ಪಂದಿಸಿದ ಸಂಘ ಟಕರು, ಪ್ರಾರ್ಥನೆಯ ಹಿನ್ನೆಲೆಯಲ್ಲಿ ಮಸೀದಿ ಎದುರು ವೌನವಾಗಿ ಸಾಗು ವಂತೆ ಮೆರವಣಿಗೆ ನಿರತರಿಗೆ ಸೂಚನೆ ನೀಡಿದರು.
ಉಡುಪಿ ನಾಯರ್ಕೆರೆಯ ಹಾಶಿಮಿ ಮಸೀದಿಯಲ್ಲಿ ನಾಪತ್ತೆಯಾಗಿರುವ ಮೀನುಗಾರರು ಸುರಕ್ಷಿತವಾಗಿ ಮರಳಿ ಬರುವಂತೆ ಇಂದು ಮಧ್ಯಾಹ್ನ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಮಸೀದಿಯ ಮುಖ್ಯ ಧರ್ಮಗುರು ಹಫೀಝ್ ಅಬೂ ಸುಫಿಯಾನ್ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ನೆರವೇರಿಸಲಾಯಿತು.