ಆರೆಸ್ಸೆಸ್ ಮುಖಂಡರ ಕೊಲೆ ಸಂಚು ವದಂತಿ ಅಲ್ಲಗಳೆದ ಎಸ್ಪಿ
"ಪ್ರಭಾಕರ ಭಟ್ ಗೆ ಭದ್ರತೆ ಹೆಚ್ಚಿಸಲಾಗಿದೆ ಎನ್ನುವುದು ಸುಳ್ಳುಸುದ್ದಿ"
ಎಸ್ಪಿ ಬಿ.ಎಂ.ಲಕ್ಷ್ಮೀಪ್ರಸಾದ್
ಮಂಗಳೂರು, ಜ.11: ಆರೆಸ್ಸೆಸ್ ಮುಖಂಡರ ಕೊಲೆಗೆ ವಿದೇಶದಲ್ಲಿ ಕುಳಿತು ಸಂಚು ರೂಪಿಸುತ್ತಿರುವ ಕುರಿತು ಕೇಂದ್ರ ಗುಪ್ತಚರ ಇಲಾಖೆಯು ದ.ಕ. ಜಿಲ್ಲಾ ಪೊಲೀಸರಿಗೆ ಯಾವುದೇ ಮಾಹಿತಿಯನ್ನು ರವಾನಿಸಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ.ಲಕ್ಷ್ಮೀಪ್ರಸಾದ್ ಸ್ಪಷ್ಟಪಡಿಸಿದ್ದಾರೆ.
‘ವಾರ್ತಾಭಾರತಿ’ಯೊಂದಿಗೆ ಮಾತನಾಡಿದ ಅವರು, ಕಲ್ಲಡ್ಕ ಪ್ರಭಾಕರ ಭಟ್ ಅವರಿಗೆ ಈ ಮೊದಲಿನಿಂದಲೂ ಪೊಲೀಸ್ ಭದ್ರತೆ ನೀಡಲಾಗುತ್ತಿದೆ. ಭದ್ರತಾ ಸಿಬ್ಬಂದಿಯನ್ನು ಹೆಚ್ಚಿಸಿಲ್ಲ. ‘ಭದ್ರತೆಗಾಗಿ ಹೆಚ್ಚುವರಿ ಸಿಬ್ಬಂದಿಯನ್ನು ಹೆಚ್ಚಿಸಲಾಗಿದೆ’ ಎನ್ನುವುದು ಸುಳ್ಳುಸುದ್ದಿ. ಎಂದಿನಂತೆಯೇ ಹಿರಿಯ ಪೊಲೀಸ್ ಅಧಿಕಾರಿಗಳು ಆಗಾಗ ಅವರ ಮನೆ ಬಳಿ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಎಸ್ಪಿ ಲಕ್ಷ್ಮೀಪ್ರಸಾದ್ ಸ್ಪಷ್ಟಪಡಿಸಿದ್ದಾರೆ.
ಪ್ರಭಾಕರ ಭಟ್ ಅವರಿಗೆ ಬೆದರಿಕೆ ಇರುವ ಕುರಿತು ನಮಗೆ ಯಾವುದೇ ರೀತಿಯ ಅಧಿಕೃತ ಮಾಹಿತಿ ಈವರೆಗೂ ಬಂದಿಲ್ಲ. ಅವರು ಪೊಲೀಸರ ರಕ್ಷಣೆಯಲ್ಲಿರುವ ವ್ಯಕ್ತಿ. ಅಂತಹವರ ಭದ್ರತಾ ವ್ಯವಸ್ಥೆಯಲ್ಲಿ ಆಗಾಗ ಬದಲಾವಣೆ ಮಾಡಲಾಗುತ್ತಿದೆ. ಹೊರಗಡೆ ತೆರಳುವಾಗ ಬೆಂಗಾವಲನ್ನೂ ನೀಡಲಾಗುತ್ತದೆ. ಇದು ಸಹಜ ಪ್ರಕ್ರಿಯೆ ಎಂದರು.