ಜ.12ರಂದು ರೆಡ್ಕ್ರಾಸ್ನಿಂದ ರಾಷ್ಟ್ರೀಯ ಯುವ ದಿನಾಚರಣೆ
ಮಂಗಳೂರು, ಜ.11: ಭಾರತೀಯ ರೆಡ್ಕ್ರಾಸ್ ಸಂಸ್ಥೆ ದ.ಕ. ಜಿಲ್ಲಾ ಶಾಖೆ ವತಿಯಿಂದ ದ.ಕ. ಜಿಲ್ಲಾ ಯುವ ರೆಡ್ಕ್ರಾಸ್ ಘಟಕ ಮತ್ತು ಮಂಗಳೂರು ವಿಶ್ವವಿದ್ಯಾಲಯ ಯುವ ರೆಡ್ಕ್ರಾಸ್ ಘಟಕ ಸಹಯೋಗದೊಂದಿಗೆ ಸ್ವಾಮಿ ವಿವೇಕಾನಂದರ 156ನೇ ಜನ್ಮದಿನಾಚರಣೆ ಅಂಗವಾಗಿ ಜ.12ರಂದು ನಗರದ ಪುರಭವನದಲ್ಲಿ ‘ರಾಷ್ಟ್ರೀಯ ಯುವ ದಿನಾಚರಣೆ’ ಆಯೋಜಿಸಲಾಗಿದೆ.
ಬೆಳಗ್ಗೆ 9ಕ್ಕೆ ನಗರದ ಬಾವುಟಗುಡ್ಡೆಯಿಂದ ಪುರಭವನದವರೆಗೆ ಮಾದಕ ದುಷ್ಪರಿಣಾಮದ ಅರಿವು ಮೂಡಿಸುವ ಜಾಥಾ ನಡೆಯಲಿದ್ದು, ಸಂಚಾರಿ ವಿಭಾಗ ಎಸಿಪಿ ಎಂ. ಮಂಜುನಾಥ ಶೆಟ್ಟಿ ಉದ್ಘಾಟಿಸುವರು. ಬೆಳಗ್ಗೆ 10ಕ್ಕೆ ಪುರಭವನದಲ್ಲಿ ಯುವ ದಿನಾಚರಣೆಯನ್ನು ಮಂಗಳೂರು ವಿವಿ ಪ್ರಭಾರ ಕುಲಪತಿ ಪ್ರೊ. ಈಶ್ವರ ಪಿ. ಉದ್ಘಾಟಿಸುವರು. ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಎಸ್ಪಿ ಬಿ.ಎಂ. ಲಕ್ಷ್ಮಿಪ್ರಸಾದ್, ಮಂಗಳೂರು ವಿವಿ ಕುಲಸಚಿವ ಪ್ರೊ.ಎ.ಎಂ. ಖಾನ್, ಒಲಂಪಿಯನ್ ಸಹನಾಕುಮಾರಿ ಅತಿಥಿಯಾಗಿ ಭಾಗವಹಿಸುವರು. ನಿವೃತ್ತ ಪ್ರಾಧ್ಯಾಪಕ ಪ್ರೊಘಿ. ವೃಷಭರಾಜ ಜೈನ್ ದಿಕ್ಸೂಚಿ ಭಾಷಣ ಮಾಡುವರು ಎಂದು ಭಾರತೀಯ ರೆಡ್ಕ್ರಾಸ್ ಸೊಸೈಟಿ ದ.ಕ. ಗೌರವ ಕಾರ್ಯದರ್ಶಿ ಎಸ್.ಎ. ಪ್ರಭಾಕರ ಶರ್ಮ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕ್ವಿಝ್ ಮತ್ತು ಜಾಥಾದಲ್ಲಿ ಭಾಗವಹಿಸಿದ ಅತ್ಯುತ್ತಮ ಕಾಲೇಜು ತಂಡಗಳಿಗೆ, ಪ್ರಕೃತಿ ವಿಕೋಪ ಸಂದರ್ಭ ವಿಶೇಷ ಸೇವೆ ನೀಡಿದವರಿಗೆ, ಅತಿ ಹೆಚ್ಚು ಬಾರಿ ರಕ್ತದಾನ ಮಾಡಿದ ವಿದ್ಯಾರ್ಥಿಗಳಿಗೆ, ಮಂಗಳೂರು ವಿವಿಯ ಅತುತ್ತಮ ಯುವ ರೆಡ್ಕ್ರಾಸ್ ಘಟಕಗಳಿಗೆ ಈ ಸಂದರ್ಭ ಪ್ರಶಸ್ತಿ ನೀಡಲಾಗುವುದು ಎಂದರು.
ರೆಡ್ಕ್ರಾಸ್ ಸೊಸೈಟಿ ದ.ಕ. ಜಿಲ್ಲಾ ಚೇರ್ಮನ್ ಶಾಂತಾರಾಂ ಶೆಟ್ಟಿ, ಸಂಚಾಲಕ ಪ್ರವೀಣ್ ಉಪಸ್ಥಿತರಿದ್ದರು.