ಮಣಿಪಾಲ: ನಾಲ್ವರು ಗಣ್ಯರಿಗೆ ‘ಹೊಸ ವರ್ಷದ ಪ್ರಶಸ್ತಿ’ ಪ್ರದಾನ
ಮಣಿಪಾಲ, ಜ.12: ಅಕಾಡೆಮಿ ಆಫ್ ಜನರಲ್ ಎಜ್ಯುಕೇಶನ್ ಮಣಿಪಾಲ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ ಮಣಿಪಾಲ ಹಾಗೂ ಸಿಂಡಿಕೇಟ್ ಬ್ಯಾಂಕ್ ಮಣಿಪಾಲ ಇವುಗಳ ಸಂಯುಕ್ತ ಆಶ್ರಯದಲ್ಲಿ ನೀಡಲಾಗುವ 2019ನೇ ಸಾಲಿನ ‘ಹೊಸ ವರ್ಷದ ಪ್ರಶಸ್ತಿ’ಯನ್ನು ಈ ಬಾರಿ ಅವಿಭಜಿತ ದ.ಕ.ಜಿಲ್ಲೆಯ ನಾಲ್ವರು ಗಣ್ಯರಿಗೆ ಇಂದು ಮಣಿಪಾಲ ಫಾರ್ಚ್ಯೂನ್ ಇನ್ ವ್ಯಾಲಿವ್ಯೆನಲ್ಲಿ ಪ್ರದಾನ ಮಾಡಲಾಯಿತು.
ಹಿರಿಯ ಪತ್ರಕರ್ತೆ, ಲೇಖಕಿ ಸಂಧ್ಯಾ ಎಸ್. ಪೈ, ವಿಜಯಾ ಬ್ಯಾಂಕಿನ ನಿವೃತ್ತ ಅಧ್ಯಕ್ಷ ಹಾಗೂ ಎಂಡಿ ಎಚ್.ಎಸ್.ಉಪೇಂದ್ರ ಕಾಮತ್ ಹಾಗೂ ಖ್ಯಾತ ಸಾಹಿತಿ, ಲೇಖಕ, ಯಕ್ಷಗಾನ ಕಲಾವಿದ ಅಂಬಾತನಯ ಮುದ್ರಾಡಿ ಅವರಿಗೆ ಇಂದು ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿ ಸ್ವೀಕರಿಸಬೇಕಿದ್ದ ಕೆಎಂಸಿ ಮಂಗಳೂರಿನ ಮಾಜಿ ಡೀನ್ ಹಾಗೂ ಖ್ಯಾತ ನರರೋಗ ತಜ್ಞ ಡಾ.ಕೆ.ಆರ್.ಶೆಟ್ಟಿ ಅವರು ಅನಾರೋಗ್ಯದ ಕಾರಣ ಗೈರುಹಾಜರಾಗಿದ್ದು, ಅವರ ಪರವಾಗಿ ಮಂಗಳೂರು ಕೆಎಂಸಿಯ ಡೀನ್ ಡಾ.ವೆಂಕಟರಾವ್ ಪ್ರಭು ಪ್ರಶಸ್ತಿ ಸ್ವೀಕರಿಸಿದರು.
ಅಕಾಡೆಮಿಯ ರಿಜಿಸ್ಟ್ರಾರ್ ಡಾ.ರಂಜನ್ ಪೈ, ಮಣಿಪಾಲ ಗ್ರೂಪ್ನ ವಂಸತಿ ಆರ್.ಪೈ, ಮಾಹೆಯ ಕುಲಪತಿ ಡಾ.ಎಚ್.ವಿನೋದ ಭಟ್, ಸಿಂಡಿಕೇಟ್ ಬ್ಯಾಂಕಿನ ಜಿಎಂ ಭಾಸ್ಕರ ಹಂದೆ, ಅಕಾಡೆಮಿಯ ಉಪಾಧ್ಯಕ್ಷ ಟಿ.ಸತೀಶ್ ಯು.ಪೈ ಅವರು ಪ್ರಶಸ್ತಿ ವಿಜೇತರನ್ನು ಶಾಲು ಹೊದಿಸಿ, ಫಲಪುಷ್ಪ, ಸ್ಮರಣಿಕೆಗಳನ್ನು ನೀಡಿ ಸನ್ಮಾನಿಸಿದರು.
ಸನ್ಮಾನಿತರಾದ ಸಂದ್ಯಾ ಪೈ, ಉಪೇಂದ್ರ ಕಾಮತ್ ಹಾಗೂ ಅಂಬಾತನಯ ಮುದ್ರಾಡಿ ಅವರು ಪ್ರಶಸ್ತಿಗೆ ಆಯ್ಕೆ ಮಾಡಿರುವುದಕ್ಕೆ ಕೃತಜ್ಞತೆಗಳನ್ನು ಅರ್ಪಿಸಿ, ಡಾ.ಟಿಎಂಎ ಪೈ, ಟಿ.ಎ.ಪೈ ಹಾಗೂ ಪೈ ಕುಟುಂಬದೊಂದಿಗೆ ತಮಗಿರುವ ಸಂಬಂಧದ ಕುರಿತು ಮಾತನಾಡಿದರು.
ಅಕಾಡೆಮಿಯ ಅಧ್ಯಕ್ಷ ಡಾ.ಎಚ್.ಎಸ್.ಬಲ್ಲಾಳ್ ಅತಿಥಿಗಳನ್ನು ಸ್ವಾಗತಿಸಿ ದರೆ, ಅಕಾಡೆಮಿಯ ಆಡಳಿತಾಧಿಕಾರಿ ಡಾ.ಎಚ್.ಶಾಂತರಾಮ್ ಸನ್ಮಾನ ಪತ್ರಗಳನ್ನು ವಾಚಿಸಿದರು. ಕಾರ್ಕಳ ಭುವನೇಂದ್ರ ಕಾಲೇಜಿನ ಪ್ರಾಂಶುಪಾಲ ಡಾ.ಮಂಜುನಾಥ ಕಾಮತ್ ವಂದಿಸಿದರೆ, ಡಾ.ಎಚ್.ಶಾಂತರಾಮ್ ಕಾರ್ಯಕ್ರಮ ನಿರೂಪಿಸಿದರು.