ಕೊರಿಯಾ ಕಲಾತ್ಮಕ ಕೈಲಿಪಿ ಪ್ರದರ್ಶನದಲ್ಲಿ ಪುತ್ತೂರಿನ ಎಸ್ಸಾರ್ ಕನ್ನಡ ಕ್ಯಾಲಿಗ್ರಫಿ ಪ್ರದರ್ಶನ
ಪುತ್ತೂರು, ಜ. 15: ದಕ್ಷಿಣ ಕೊರಿಯದಲ್ಲಿ ಜರುಗಿದ 'ಕಲಾತ್ಮಕ ಕೈಲಿಪಿ' (ಕಾಲಿಗ್ರಫಿ) ಪ್ರದರ್ಶನದಲ್ಲಿ ಪುತ್ತೂರಿನ ಕಲಾವಿದ ಎಸ್ಸಾರ್ ಪುತ್ತೂರು (ಶಿವರಾಮ ಇ.ವಿ) ಅವರ ಕೈಲಿಪಿ ರಚನಾ ಮಾದರಿಯು ಪ್ರದರ್ಶನಗೊಂಡು ಉತ್ತಮ ಪ್ರಶಂಸೆಗೆ ಪಾತ್ರವಾಗಿದೆ. ಅವರು ಡಿ.ವಿ.ಜಿ.ಯವರ ಮಂಕುತಿಮ್ಮನ ಕಗ್ಗವೊಂದನ್ನು ಕೈಲಿಪಿಯ ಮಾದರಿಗೆ ಬಳಸಿಕೊಂಡಿದ್ದರು.
ದಕ್ಷಿಣ ಕೊರಿಯ ಸರಕಾರವು ಆಯೋಜಿಸಿದ್ದ ಹದಿನೈದನೇ ಚ್ಯೊಂಗ್ಯು ಜಿಕಜಿ ಅಂತಾರಾಷ್ಟ್ರೀಯ ಕ್ಯಾಲಿಗ್ರಫಿ ಪ್ರದರ್ಶನದಲ್ಲಿ ಕನ್ನಡದ ಈ ಕೈಲಿಪಿ ಅವಕಾಶ ಪಡೆದುಕೊಂಡಿದೆ. ಜಿಕಜಿ ಪ್ರದರ್ಶನದಲ್ಲಿ ಕನ್ನಡ ಕ್ಯಾಲಿಗ್ರಫಿ ಮೊತ್ತ ಮೊದಲ ಬಾರಿಗೆ ಸ್ಥಾನ ಪಡೆದಿಕೊಂಡಿದ್ದು, ಈ ಪ್ರದರ್ಶನದಲ್ಲಿ ಎಸ್ಸಾರ್ ಅವರ ಕೈಲಿಪಿಯಲ್ಲಿ ಮೂಡಿ ಬಂದಿದೆ.
ಕೇರಳದ ತಿರುವನಂತಪುರದ ಪ್ರಸಿದ್ಧ ಮಲಯಾಳಂ ಕ್ಯಾಲಿಗ್ರಾಫರ್ ಆಗಿರುವ ನಾರಾಯಣ ಭಟ್ಟಾತಿರಿ ಅವರ ಸಂಘಟನೆಯಲ್ಲಿ ಎಸ್ಸಾರ್ ತನ್ನ ಕ್ಯಾಲಿಗ್ರಫಿಯನ್ನು ಪ್ರದರ್ಶನಕ್ಕೆ ಕಳುಹಿಸಿ ಕೊಟ್ಟಿದ್ದರು.
ಪುತ್ತೂರಿನ ಪ್ರಧಾನ ಅಂಚೆ ಕಚೇರಿಯಲ್ಲಿ ಅಂಚೆ ಸಹಾಯಕರಾಗಿರುವ ಎಸ್ಸಾರ್ ಹವ್ಯಾಸಿ ಚಿತ್ರ ಕಲಾವಿದ ಹಾಗೂ ವ್ಯಂಗ್ಯಚಿತ್ರಗಾರರಾಗಿದ್ದಾರೆ. ಕೃಷಿ ಬದುಕನ್ನು ವಸ್ತುವಾಗಿಸಿ ವಂಗ್ಯಚಿತ್ರಗಳನ್ನು ರಚಿಸುತ್ತಿರುವ ಎಸ್ಸಾರ್ ಅವರು ಕನ್ನಡ ಕೈಲಿಪಿಯಲ್ಲಿ ಹಲವಾರು ಪುಸ್ತಕಗಳಿಗೆ ಮುಖಚಿತ್ರ ರಚಿಸಿದ್ದಾರೆ.