ಪೊಲೀಸ್ ಎಸ್ಸೈ ಪರೀಕ್ಷೆ ಕುರಿತ ಸುಳ್ಳು ವದಂತಿಗೆ ಕಿವಿಕೊಡದಿರಲು ಮನವಿ
ಮಂಗಳೂರು, ಜ.17: ಪೊಲೀಸ್ ಸಬ್ ಇನ್ಸ್ಪೆಕ್ಟರ್ (ಸಿವಿಲ್) 190 ಹುದ್ದೆಗಳ ನೇಮಕಾತಿ ಸಲುವಾಗಿ ನೇಮಕಾತಿ ಪ್ರಕ್ರಿಯೆಯನ್ವಯ ಅರ್ಜಿ ಸಲ್ಲಿಸಿರುವ ಅರ್ಹ ಅಭ್ಯರ್ಥಿಗಳಿಗೆ ನಿಯಮಾನುಸಾರ ಜ.13ರಂದು ಬೆಂಗಳೂರು ನಗರ, ಮೈಸೂರು ನಗರ, ಬೆಳಗಾವಿ, ದಾವಣಗೆರೆ ಮತ್ತು ಕಲಬುರಗಿ ಕೇಂದ್ರಗಳಲ್ಲಿ ಲಿಖಿತ ಪರೀಕ್ಷೆಯನ್ನು ನಡೆಸಲಾಗಿದೆ.
ಈ ಮಧ್ಯೆ ಕೆಲವು ಮಾಧ್ಯಮಗಳಲ್ಲಿ ಲಿಖಿತ ಪರೀಕ್ಷೆಯ ಪ್ರಶ್ನೆ ಪತ್ರಿಕೆಯು ಸೋರಿಕೆಯಾಗಿರುವ ಬಗ್ಗೆ ಸುದ್ದಿ ಪ್ರಸಾರವಾಗಿರುತ್ತದೆ. ಇದು ಕೇವಲ ವದಂತಿಯಾಗಿದ್ದು, ಕೆಲವು ವಂಚಕರು ಅಭ್ಯರ್ಥಿಗಳಿಗೆ ಮೋಸ ಮಾಡುವ ಸಲುವಾಗಿ ಪಿಎಸ್ಐ (ಸಿವಿಲ್) ಹುದ್ದೆಯ ಲಿಖಿತ ಪರೀಕ್ಷೆಯ ಪ್ರಶ್ನೆ ಪತ್ರಿಕೆ ನಮ್ಮಲ್ಲಿ ಲಭ್ಯವಿರುವುದಾಗಿ ನಂಬಿಸಿ ಹಣಕ್ಕಾಗಿ ಅಭ್ಯರ್ಥಿಗಳನ್ನು ತಪ್ಪುದಾರಿಗೆಳೆಯುವ ಸಂಚು ರೂಪಿಸಿದ್ದಾರೆ ಎಂದು ಪೊಲೀಸ್ ನೇಮಕಾತಿ ವಿಭಾಗದ ಅಡಿಷನಲ್ ಡೈರೆಕ್ಟರ್ ಜನರಲ್ ರಾಘವೇಂದ್ರ ಔರಾದ್ಕರ್ ತಿಳಿಸಿದ್ದಾರೆ.
ಈ ವಂಚಕರು ಕೆಲವು ಅಭ್ಯರ್ಥಿಗಳ ದಿಕ್ಕು ತಪ್ಪಿಸಿದ್ದು, ಆ ಹಿನ್ನಲೆಯಲ್ಲಿ ಕೆಲವೊಂದು ವಂಚಕರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಈ ಪರೀಕ್ಷೆಯು ರಾಜ್ಯದ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಸುಸೂತ್ರವಾಗಿ ನಡೆದಿದೆ. ಆದ್ದರಿಂದ ಅಭ್ಯರ್ಥಿಗಳು ಯಾವುದೇ ಸುಳ್ಳು ವದಂತಿಗೆ ಕಿವಿಕೊಡಬಾರದು ಮತ್ತು ಆತಂಕ ಪಡುವ ಅಗತ್ಯವಿಲ್ಲವೆಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.