ಡಾ.ರಾಜೇಂದ್ರ ಕುಮಾರ್ ರಜತ ಸಂಭ್ರಮದ ಮೆರವಣಿಗೆಗೆ ಅದ್ಧೂರಿ ಚಾಲನೆ
ಮಂಗಳೂರು, ಜ.19: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಲ್ಲಿ 25 ವರ್ಷ ಅಧ್ಯಕ್ಷತೆ ವಹಿಸಿರುವ ಡಾ. ಎಂ.ಎನ್. ರಾಜೇಂದ್ರ ಕುಮಾರ್ ರಜತ ಸಂಭ್ರಮ ಮತ್ತು ನವೋದಯ ಸ್ವಸಹಾಯ ಸಂಘಗಳ ವಿಂಶತಿ ಸಮಾವೇಶದ ಪ್ರಯುಕ್ತದ ಮೆರವಣಿಗೆಗೆ ನಗರದ ಕೊಡಿಯಾಲ್ ಬೈಲ್ ನ ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ಕೇಂದ್ರ ಕಚೇರಿ ಎದುರು ಕೇಂದ್ರ ಸಚಿವ ಸದಾನಂದ ಗೌಡ ಚಾಲನೆ ನೀಡಿದರು.
ಈ ಸಂದರ್ಭ ಸಂಸದ ನಳಿನ್ ಕುಮಾರ್ ಕಟೀಲ್, ಅಭಿನಂದನ ಸಮಿತಿ ಅಧ್ಯಕ್ಷ ಐಕಳಬಾವ ಡಾ. ದೇವಿಪ್ರಸಾದ್, ಸಮಿತಿಯ ಪ್ರಮುಖರಾದ ರಾಜು ಪೂಜಾರಿ, ಶಶಿಕಿರಣ್, ಸದಾಶಿವ ಉಳ್ಳಾಲ್, ಮೋನಪ್ಪ ಶೆಟ್ಟಿ ಎಕ್ಕಾರು, ಸುನಿಲ್ ಕುಮಾರ್ ಬಜಗೋಳಿ, ದೇವರಾಜ್ ಉಪಸ್ಥಿತರಿದ್ದರು.
ಬ್ಯಾಂಕ್ ಆವರಣದಿಂದ ಮೆರವಣಿಗೆ ಹೊರಟು ರಮಣ ಪೈ ಹಾಲ್ನಿಂದ ರಸ್ತೆಯಿಂದ ಹಂಪನ್ಕಟ್ಟೆ- ಕ್ಲಾಕ್ ಟವರ್- ಎ.ಬಿ. ಶೆಟ್ಟಿ ಸರ್ಕಲ್ ಮೂಲಕ ಮೈದಾನದೊಳಗೆ ಸಾಗಲಿದೆ.
ಮೆರವಣಿಗೆಯುದ್ದಕ್ಕೂ 61ಕ್ಕೂ ಹೆಚ್ಚು ಕಲಾ ತಂಡಗಳಿದ್ದು, 100 ಚೆಂಡೆಗಳ ತಂಡ ಹಾಗೂ ಗೊಂಬೆಗಳ ಆಟ ಪಾಂಚ್ ಪಂಕರ್ಸ್, ಬಾಡಿಗಾರ್ಡ್ ವೇಷ, ಆಳ್ವಾಸ್ ನ ಗೊರಿಲ್ಲಾ, ಉಡುಪಿಯ ಬೃಹತ್ ಕೋಣ ಮತ್ತು ಕಟ್ಟಪ್ಪ, ಮಂಡ್ಯದ ನಂದಿ ಕಂಬ ಮೆರವಣಿಗೆಗೆ ವಿಶೇಷ ಆಕರ್ಷಣೆ ನೀಡಿದವು.