ಜ. 26ರಂದು ಹೆಜಮಾಡಿಯಲ್ಲಿ ಮಾನವಸರಪಳಿ
ಪಡುಬಿದ್ರಿ, ಜ. 19: ರಾಷ್ಟ್ರ ರಕ್ಷಣೆಗೆ ಸೌಹಾರ್ದತೆಯ ಸಂಕಲ್ಪ ಘೋಷಣೆಯಡಿ ಎಸ್ಕೆಎಸ್ಎಸ್ಎಫ್ ವತಿಯಿಂದ ಜ. 26ರಂದು ಹೆಜಮಾಡಿಯಲ್ಲಿ ಮಾನವಸರಪಳಿ ನಡೆಯಲಿದೆ.
ಹೆಜಮಾಡಿಯಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ದಕ್ಷಿಣ ಕರ್ನಾಟಕ ಮುಶಾವರ ಪತ್ರಿಕಾ ಕಾರ್ಯದರ್ಶಿ ಮೌಲಾನಾ ಯು.ಕೆ.ಅಬ್ದುಲ್ ಅಝೀಝ್ ದಾರಿಮಿ ಕಾರ್ಯಕ್ರಮದ ವಿವರ ನೀಡಿದರು.
ರಾಷ್ಟ್ರ ಪ್ರೇಮ ವಿಶ್ವಾಸದ ಒಂದು ಭಾಗವಾಗಿದೆ. ಈ ನಿಟ್ಟಿನಲ್ಲಿ ಜನರಲ್ಲಿ ರಾಷ್ಟ್ರಪ್ರಜ್ಞೆ ಮೂಡಿಸುವ ನಿಟ್ಟಿನಲ್ಲಿ ಗಣರಾಜ್ಯೋತ್ಸವದಂದು ಎಸ್ಕೆಎಸ್ಎಸ್ಎಫ್ ಪ್ರತೀ ವರ್ಷ ಮಾನವಸರಪಳಿ ಕಾರ್ಯಕ್ರಮವನ್ನು ನಡೆಸುತ್ತಿದೆ. ಈ ಭಾರಿ ಉಡುಪಿ ಜಿಲ್ಲೆಯ ಹೆಜಮಾಡಿ, ದಕ್ಷಿಣ ಕನ್ನಡ ಜಿಲ್ಲೆಯ ಕಬಡ, ಚಿಕ್ಕಮಗಳೂರಿನ ಆಲ್ದೂರು, ಕೊಡಗು ಹಾಗೂ ಬೆಂಗಳೂರಿನಲ್ಲಿ ನಡೆಯಲಿದೆ. ಗಣರಾಜ್ಯೋತ್ಸವ ಪ್ರಯುಕ್ತ ಅಂದು ಬೆಳಗ್ಗೆ 9ಗಂಟೆಗೆ ಅಝ್ಹರ್ ಫೈಝಿ ಬೊಳ್ಳೂರು ಉಸ್ತಾದ್ ಧ್ಜಜಾರೋಹಣ ನೆರವೇರಿಸಲಿದ್ದಾರೆ.
ಮಧ್ಯಾಹ್ನ ಕನ್ನಂಗಾರ್ ಜುಮ್ಮಾ ಮಸೀದಿಯಿಂದ ದರ್ಗಾ ಝಿಯಾರತ್ನೊಂದಿಗೆ ರ್ಯಾಲಿ ನಡೆಯಲಿದೆ. ರ್ಯಾಲಿಯು ಅರಫಾ ಹೊಟೇಲ್ನಿಂದ ಬಳಿಕ ಕನ್ನಂಗಾರ್ ಮೂಲಕ ಸರಕಾರಿ ಪ್ರಾಥಮಿಕ ಶಾಲೆ ಹೆಜಮಾಡಿಯ ಮೈದಾನದಲ್ಲಿ ಸಮಾವೇಶಗೊಳ್ಳಲಿದೆ.
ರ್ಯಾಲಿಯಲ್ಲಿ ಸ್ಕೌಟ್ರ, ದಫ್, ಮದರಸ ವಿದ್ಯಾರ್ಥಿಗಳು, ಎಸ್ಕೆಎಸ್ಎಸ್ಎಫ್ ಕಾರ್ಯಕರ್ತರು, ಸಾವೇಜನಿಕರು, ಧರ್ಮಗುರುಗಳು ಭಾಗವಹಿಸಲಿ ದ್ದಾರೆ. ಸಣೆಯಲ್ಲಿ 5000 ಮಂದಿ ಸೇರುವ ನಿರೀಕ್ಷೆ ಇದೆ. ಸಮಾರಂಭದಲ್ಲಿ ಆತ್ರಾಡಿ ಖಾಝಿ ವಿ.ಕೆ.ಅಬೂಬಕ್ಕರ್ ಮುಸ್ಲಿಯಾರ್, ಕೇಮಾರು ಸಾಂದೀಪನೀ ಸಾಧನಾಶ್ರಮದ ಶ್ರೀ ಈಶ ವಿಠಲದಾಸ ಸ್ವಾಮೀಜಿ, ಕಾರ್ನಾಡು ಚರ್ಚ್ ಧರ್ಮಗುರು ವಂದನೀಯ ಫಾದರ್ ಸಿಲ್ವೆಸ್ಟರ್ ಡಿಕೋಸ್ತ, ಯಾಸೀರ್ ಅರಾಫಾತ್ ಕೌಸರಿ ಮುಖ್ಯಭಾಷಣ ಮಾಡಲಿದ್ದಾರೆ. ಧಾರ್ಮಿಕ, ರಾಜಕೀಯ, ಸಾಮಾಜಿಕ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ವಿವರ ನೀಡಿದರು.
ಮಾನವಸರಪಳಿ ಸ್ವಾಗತ ಸಮಿತಿಯ ಉಡುಪಿ ಜಿಲ್ಲಾಧ್ಯಕ್ಷ ಆಸೀಫ್ ಹನಾನ್, ಫಲಿಮಾರು ಮಸೀದಿ ಖತೀಬ್ ಅಬ್ದುರ್ರಹ್ಮಾನ್ ಫೈಝಿ, ಮುಹಮ್ಮದ್ ಶಬೀರ್ ಫೈಝಿ ಎರ್ಮಾಳು, ಪಡುಬಿದ್ರಿಯ ಹಿಮಾಯತುಲ್ ಇಸ್ಲಾಂ ಸಂಘದ ಅಧ್ಯಕ್ಷ ಶಬೀರ್ ಹುಸೈನ್ ಪಡುಬಿದ್ರಿ, ಅಬ್ದುರ್ರಹ್ಮಾನ್ ದಾರಿಮಿ ಚೊಕ್ಕಬೆಟ್ಟು, ಜಿ.ಎಸ್.ಉಸ್ಮಾನ್ ಪಾಶಾ ಫಲಿಮಾರು, ಸಿರಾಜ್ ಕನ್ನಂಗಾರ್, ಇಕ್ಬಾಲ್ ಕನ್ನಂಗಾರ್, ನಿಯಾಝ್ ಎರ್ಮಾಳು, ಅಹಮದ್ ಹಾಜಿ ಉಚ್ಚಿಲ, ಶಂಶುದ್ದೀನ್ ಉಚ್ಚಿಲ ಉಪಸ್ಥಿತರಿದ್ದರು.