ಕೆಲಸವನ್ನು ಪ್ರೀತಿಯಿಂದ ಮಾಡಿದರೆ ಯಶಸ್ಸು ಸಿಗಬಹದು: ರೋಹಿಣಿ
ಉಳ್ಳಾಲ, ಜ. 23: ದೊಡ್ಡ ಕೆಲಸವಾದರೂ, ಸಣ್ಣ ಕೆಲಸವಾದರೂ ಸರಿ, ಅದನ್ನು ಪ್ರೀತಿಯಿಂದ ಮಾಡಬೇಕು. ಆಗ ಮಾತ್ರ ಯಶಸ್ಸು ನಮಗೆ ಸಿಗಲು ಸಾಧ್ಯ. ಇದನ್ನು ನೋಡಿ ಮತ್ತೊಬ್ಬರು ಕಲಿಯುತ್ತಾರೆ. ಇದರಿಂದ ಸ್ವಚ್ಛತೆ ಉಳಿಯುತ್ತದೆ. ಶಾಲೆಯ ಸುತ್ತ ಮೀನು ವಾಸನೆ ಬಂದರೂ ಟಿಪ್ಪು ಸುಲ್ತಾನ್ ಶಾಲೆ ಸ್ವಚ್ಛವಾಗಿದೆ. ಇಂತಹ ಕೆಲಸಗಳನ್ನು ಮಾಡುವ ಮೂಲಕ ಭಾವೀ ಪ್ರಜೆಗಳಾಗಿ ಉನ್ನತ ಹಂತಕ್ಕೆ ವಿದ್ಯಾರ್ಥಿಗಳು ಬೆಳೆಯಲಿ ಎಂದು ದ.ಕ. ಜಿಲ್ಲಾ ವಾರ್ತಾಧಿಕಾರಿ ರೋಹಿಣಿ ಹೇಳಿದರು.
ಅವರು ಉಳ್ಳಾಲದ ಟಿಪ್ಪು ಸುಲ್ತಾನ್ ಶಾಲೆಯಲ್ಲಿ ಬುಧವಾರ ನಡೆದ ಜಿಲ್ಲಾಧಿಕಾರಿಯೊಂದಿಗೆ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಮಾಡಿದ ಸ್ವಚ್ಛತೆಯ ಕಾರ್ಯಕ್ರಮವನ್ನು ಮೆಚ್ಚುಗೆ ವ್ಯಕ್ತಪಡಿಸಿ ಮಾತನಾಡಿದರು.
ಉಳ್ಳಾಲ ಪೌರಾಯುಕ್ತೆ ವಾಣಿ ಆಳ್ವ ಮಾತನಾಡಿ, ಉಳ್ಳಾಲ ನಗರ ಸಭೆ ಬಹಳಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಆದರೆ ಮುಂದಿನ ಪೀಳಿಗೆಗೆ ಯಾವ ರೀತಿಯ ಯೋಜನೆಗಳನ್ನು ಹಾಕಿಕೊಳ್ಳಬೇಕು ಎಂಬುದಕ್ಕೆ ವಿದ್ಯಾರ್ಥಿಗಳಿಂದಲೇ ಬೆಂಬಲ ಸಿಕ್ಕಿದೆ. ಉಳ್ಳಾಲದಲ್ಲಿರುವ 48 ಶಾಲೆಗಳಿಗೆ ಕೋಟೆಪುರ ಮಾದರಿ ಶಾಲೆಯಾಗಿ ಬಿಟ್ಟಿದೆ. ಸ್ವಚ್ಚತೆ ಹೇಗಿರಬೇಕೆಂದು ವಿದ್ಯಾರ್ಥಿಗಳೇ ತೋರಿಸಿಕೊಟ್ಟಿದ್ದಾರೆ. ಅವರನ್ನು ಗೌರವಿಸುವ ಕಾರ್ಯಕ್ರಮ ವನ್ನು ಮಾಡಲು ಪ್ರಯತ್ನಿಸುತ್ತೇನೆ. ಇದೇ ರೀತಿಯ ಸ್ವಚ್ಛತೆ ಇನ್ನೂ ಮುಂದುವರಿಯಲಿ ಎಂದು ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೇಂದ್ರ ಜುಮಾ ಮಸೀದಿ ಉಪಾಧ್ಯಕ್ಷ ಮೋನು ಇಸ್ಮಾಯಿಲ್ ವಹಿಸಿದ್ದರು. ಉಳ್ಳಾಲ ಕೌನ್ಸಿಲರ್ ಮುಹಮ್ಮದ್ ರಮೀಝ್, ದ.ಕ. ಜಿಲ್ಲಾ ಸ್ವಚ್ಛತಾ ರಾಯಬಾರಿ ಶೀನ ಶೆಟ್ಟಿ, ಜನ ಶಿಕ್ಷಣ ಟ್ರಸ್ಟ್ ನಿರ್ದೇಶಕ ಕೃಷ್ಣ ಮೂಲ್ಯ, ಇಲ್ಯಾಸ್, ಬಾವ ಮೊಹಮ್ಮದ್, ಅಬ್ದುಲ್ ರಹಿಮಾನ್, ಅಬ್ದುಲ್ ರಝಾಕ್ ಉಪಸ್ಥಿತರಿದ್ದರು.
ಎಂಎಚ್ ಮಲಾರ್ ಸ್ವಾಗತಿಸಿದರು. ಬಿ.ಎಂ. ರಫೀಕ್ ತುಂಬೆ ಕಾರ್ಯಕ್ರಮ ನಿರೂಪಿಸಿದರು. ಗೀತಾ ವಂದಿಸಿದರು.