ಮತ್ತೊಬ್ಬ ಶಾಸಕರಿಗೆ ಬಿಜೆಪಿಯಿಂದ ಆಮಿಷ: ಮುಖ್ಯಮಂತ್ರಿ ಕುಮಾರಸ್ವಾಮಿ
ಧರ್ಮಸ್ಥಳ, ಫೆ .9: ಇಂದು ಬೆಳಗ್ಗೆ, ನಿನ್ನೆ ರಾತ್ರಿ ಮತ್ತೊಬ್ಬ ಶಾಸಕರಿಗೆ ನಮ್ಮ ಪಕ್ಷಕ್ಕೆ ಬಾ ಹಣ ಕೊಡ್ತೇವೆ ಎಂದು ಆಮಿಷ ಒಡ್ಡಿದ್ದಾರೆ. ಅವರ ಚಾಳಿ ಬಿಟ್ಟಿಲ್ಲ ಎಂದು ಬಿಜೆಪಿಯ ವಿರುದ್ಧ ಮತ್ತೆ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.
ಶ್ರೀ ಕ್ಷೇತ್ರ ಧರ್ಮಸ್ಥಳದ ಮಹಾ ಮಸ್ತಕಾಭಿಷೇಕ ಸಲುವಾಗಿ ಹಮ್ಮಿಕೊಂಡ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಸುದ್ದಿಗಾರರನ್ನುದ್ದೇಶಿ ಅವರು ಮಾತನಾಡಿದರು.
ಬಿಜೆಪಿ ಪಕ್ಷದ ಸೂತ್ರದಾರ ಶಾಸಕರು ನಮ್ಮ ಪಕ್ಷದ ಶಾಸಕರಿಗೆ ಆಮಿಷ ಒಡ್ಡುವುದನ್ನು ಇನ್ನೂ ಬಿಟ್ಟಿಲ್ಲ. ಇದರಿಂದ ಅವರು ಏನು ಸಾಧನೆ ಮಾಡಲಾಗುವುದಿಲ್ಲ. ಸರಕಾರ ಸುಭದ್ರವಾಗಿದೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.
ವೀಡಿಯೊ ನಕಲಿಯಾಗಿದ್ದರೆ ನಾನೆ ರಾಜಕೀಯದಿಂದ ನಿವೃತ್ತಿ ಹೊಂದುತ್ತೇನೆ
ಬಿಜೆಪಿಯಿಂದ ಸಮ್ಮಿಶ್ರ ಸರಕಾರವನ್ನು ಉರುಳಿಸಲು ಕೋಟ್ಯಾಂತರ ರೂಪಾಯಿ ಆಮಿಷ ಒಡ್ಡುತ್ತಿದ್ದಾರೆ. ಈ ಬಗ್ಗೆ ಆಡಿಯೊ ಬಿಡುಗಡೆ ಮಾಡಿದರೂ ಬಿಜೆಪಿ ಮುಖಂಡರು ಈ ಕೆಲಸದಿಂದ ಹಿಂದೆ ಸರಿದಿಲ್ಲ. ಶಾಸಕರಿಗೆ ಆಮಿಷ ಒಡ್ಡುವ ವಿಚಾರಕ್ಕೆ ಸಂಬಂದಿಸಿ ವೀಡಿಯೊ ನಕಲಿಯಾಗಿದೆ. ಅದರಲ್ಲಿರುವ ಮಾತುಗಳು ಯಡಿಯೂರಪ್ಪರ ಮಾತುಗಳಲ್ಲ. ಮಿಮಿಕ್ರಿಯಾಗಿದೆ ಎಂದು ಆರೋಪಿಸುತ್ತಿರುವ ಬಿಜೆಪಿ ಮುಖಂಡರು ಅದನ್ನು ಸಾಬೀತು ಮಾಡಲಿ. ನಾನು ನಕಲಿ ಆಡಿಯೋ ಮಾಡಿದ್ದೇನೆ ಎನ್ನುವುದು ಯಡಿಯೂರಪ್ಪ ಸಾಬೀತುಪಡಿಸಿದರೆ ಯಡಿಯೂರಪ್ಪ ರಾಜಕೀಯದಿಂದ ನಿವೃತ್ತಿ ಹೊಂದಬೇಕಾಗಿಲ್ಲ, ನಾನೆ ರಾಜಕೀಯದಿಂದ ನಿವೃತ್ತಿ ಹೊಂದುತ್ತೇನೆ ಎಂದು ಕುಮಾರಸ್ವಾಮಿ ಸವಾಲೆಸೆದಿದ್ದಾರೆ.
ಸ್ಪೀಕರ್ ರಮೇಶ್ ಕುಮಾರ್ ಅವರ ಹೆಸರನ್ನು ಎಳೆದು ತರಲಾಗಿದೆ ಎಂದು ಹೇಳಿದ್ದೇನೆ. ಈ ಬಗ್ಗೆ ತನಿಖೆಯಾಗಬೇಕು ಎಂದು ಅವರು ಹೇಳಿದ್ದಾರೆ. ಈ ಬಗ್ಗೆ ಸೋಮವಾರ ಸದನದಲ್ಲಿ ರಮೇಶ್ ಕುಮಾರ್ ಅವರೆ ತೀರ್ಪು ಕೊಡ್ತಾರೆ. ಕಾದು ನೋಡೋಣ, ಧರ್ಮಸ್ಥಳದಲ್ಲಿ ಹಿಂದೆ ಮಂಜುನಾಥ ಸ್ವಾಮಿ ಹೆಸರಿನಲ್ಲಿ ರಕ್ಷಣೆ ಪಡೆಯಲು ಆಗಿಲ್ಲ. ಒಂದು ತಿಂಗಳಲ್ಲಿ ಯಡಿಯೂರಪ್ಪ ರಾಜಿನಾಮೆ ಕೊಟ್ಟಿದ್ದಾರೆ. ಈ ಕ್ಷೇತ್ರದ ಬಗ್ಗೆ ನನಗೆ ನಂಬಿಕೆಯಿದೆ. ಅರವಿಂದ ನಿಂಬಾವಳಿ ಆರೋಪಿಸಿರುವ ಆಡಿಯೋ ರೀಪ್ಲೇ ಆಗಬೇಕೆಂದರೆ ಆಗಲಿ, ನಾನು ಸಿದ್ದನಿದ್ದೇನೆ. ನಾನು ಹಣದ ಆಮಿಷ ಒಡ್ಡಿದ್ದೇನೆಯೇ ? ನಾನು ಯಾವ ಆಡಿಯೋ ಮಾಡಿಸಿಲ್ಲ. ಹಿಂದೆ ಹೈದರಾಬಾದ್ನಲ್ಲಿ ಯಡಿಯೂರಪ್ಪ ಶ್ರಮ ಪಟ್ಟು ಆಡಿಯೋ ಮಾಡಿಸಿದ್ದಾರೆ. ಆ ಆಡಿಯೋ ನಕಲಿ ಎನ್ನುವುದು ಎಲ್ಲರಿಗೂ ಗೊತ್ತಾಗಿದೆ.