ಮಂಗಳೂರು ವಿವಿಯಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರ
ಕೊಣಾಜೆ, ಫೆ. 11: ಮಂಗಳೂರು ವಿಶ್ವವಿದ್ಯಾಲಯದ ಶಿಕ್ಷಕೇತರ ಉದ್ಯೋಗಿಗಳ ಸಂಘದ ವೈದ್ಯಕೀಯ ನೆರವು ಘಟಕದ ವತಿಯಿಂದ ಉಚಿತ ವೈದ್ಯಕೀಯ ತಪಾಸಣಾ ಶಿಬಿರವು ಮಂಗಳೂರು ವಿವಿಯ ಆರೋಗ್ಯ ಕೇಂದ್ರದಲ್ಲಿ ಕಿನ್ಯ ಶಾರದಾ ಆಯುರ್ವೇದ ಆಸ್ಪತ್ರೆಯ ಸಹಯೋಗದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಶಾರದಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಪ್ರೊ.ಎಂ.ಬಿ.ಪುರಾಣಿಕ್ ಅವರು ಉದ್ಘಾಟಿಸಿ, ಪ್ರಕೃತಿ ಮತ್ತು ಮಾನವನ ಸಂಬಂಧ ಬಹಳ ಪೂರಕವಾದುದು. ಹಾಗೆಯೇ ಆಯುರ್ವೇದವು ಇಂದು ವೈದ್ಯಕೀಯ ಪದ್ದತಿಯಲ್ಲಿ ಪ್ರಮುಖವಾಗಿ ಗುರುತಿಸಲ್ಪಡುತ್ತಿದೆ. ಆಯುರ್ವೇದವನ್ನು ಕಡೆಗಣಿಸದೆ ಅದರ ಉಪಯೋಗಗಳ ಬಗ್ಗೆ ನಾವು ತಿಳಿದುಕೊಳ್ಳಬೇಕಿದೆ. ಅಲ್ಲದೆ ಇಂತಹ ಉಚಿತ ವೈದ್ಯಕೀಯ ತಪಾಸಣಾ ಶಿಬಿರದಲ್ಲಿ ಹೆಚ್ಚೆಚ್ಚು ಜನರು ಭಾಗವಹಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವರಾದ ಪ್ರೊ.ಎ.ಎಂ.ಖಾನ್ ಅವರು, ಆಯುರ್ವೇದ ಬಗೆಗಿನ ಜ್ಞಾನವನ್ನು ನಾವು ಹೆಚ್ಚೆಚ್ಚು ಪಸರಿಸುವ ಕಾರ್ಯ ಮಾಡಬೇಕು. ಅಲ್ಲದೆ ಆರ್ಯುವೇದವನ್ನು ನಾವು ಅನುಸರಿಸುತ್ತಾ ಬಂದರೆ ಹೆಚ್ಚು ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಡಾ.ರಾಜೇಶ್, ಡಾ.ರವಿ ಗಣೇಶ್, ವಿವೇಕ್ ತಂತ್ರಿ, ಕಮಲಾಕ್ಷಿ ಪಿ, ಶಿವಾನಂದ ಪೂಜಾರಿ, ತಝನೀಸ್ ಬಾನು, ನಾಗಪ್ಪ ಗೌಡ ಮೊದಲಾದವರು ಉಪಸ್ಥಿತರಿದ್ದರು.