ಉಚಿತ ವೈದ್ಯಕೀಯ ತಪಾಸಣೆ: ಕ್ಯಾನ್ಸರ್ ಕುರಿತ ಮಾಹಿತಿ ಶಿಬಿರ
ಮಂಗಳೂರು, ಫೆ.11: ಜಮೀಯ್ಯತುಲ್ ಫಲಾಹ್ ಮಂಗಳೂರು ನಗರ ಘಟಕ, ಜಿಎಚ್ಎಂ ಫೌಂಡೇಶನ್ ಮೂಲರಪಟ್ಲ ಜಂಟಿ ಆಶ್ರಯದಲ್ಲಿ ಯೆನಪೊಯ ಆಸ್ಪತ್ರೆ ದೇರಳಕಟ್ಟೆ ಮಂಗಳೂರು ಸಹಯೋಗದೊಂದಿಗೆ ಉಚಿತ ವೈದ್ಯಕೀಯ ತಪಾಸಣೆ ಹಾಗೂ ಕ್ಯಾನ್ಸರ್ ಬಗ್ಗೆ ಮಾಹಿತಿ ಶಿಬಿರವನ್ನು ಬಂಟ್ವಾಳ ತಾಲೂಕಿನ ಮೂಲರಪಟ್ಣದ ಆಝಾದ್ ನಗರದ ಮೌಲಾನ ಆಝಾದ್ ಉರ್ದು ಶಾಲಾ ವಠಾರದಲ್ಲಿ ರವಿವಾರ ಹಮ್ಮಿಕೊಳ್ಳಲಾಗಿತ್ತು.
ಉಚಿತ ವೈದ್ಯಕೀಯ ತಪಾಸಣೆ ಹಾಗೂ ಕ್ಯಾನ್ಸರ್ ಬಗ್ಗೆ ಮಾಹಿತಿ ಶಿಬಿರವನ್ನು ಜೆ.ಎಫ್. ನಗರ ಘಟಕದ ಕಾರ್ಯಕಾರಿ ಸಮಿತಿ ಸದಸ್ಯ ಹಾಗೂ ವೈಎಂಸಿಎಚ್ ಇಲ್ಲಿಯ ಫೈನಾನ್ಸ್ ಮ್ಯಾನೇಜರ್ ಹಾಮೆದ್ ಬಾವಾ ಉದ್ಘಾಟಿಸಿದರು.
ಜಿಎಚ್ಎಂ ಅಧ್ಯಕ್ಷ ಮುಹಮ್ಮದ್ ಶಾಲಿ ಶಿಬಿರದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉರ್ದು ಹಿರಿಯ ಪ್ರಾಥಮಿಕ ಶಾಲಾ ಹೆಡ್ ಮಾಸ್ಟರ್ ಶಮೀನಾ ಅಖ್ತರ್, ಜಿ.ಎಚ್.ಎಂ. ಸಲಹೆಗಾರ ಎಂ.ಬಿ.ಅಶ್ರಫ್, ಮೂಲರಪಟ್ಣದ ಎಸ್ಡಿಎಂಸಿ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಅಧ್ಯಕ್ಷ ಎಂ.ಅಶ್ರಫ್, ಸಮಾಜ ಸೇವಕ ಫರೀದ್ ಅಹ್ಮದ್ ನದಾಫ್ (ಎಂಆರ್ಪಿಎಲ್) ಮತ್ತಿತರರು ಭಾಗವಹಿಸಿದ್ದರು.
ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಡಿಆರ್ಐ ಇಬ್ರಾಹೀಂ ನಾಗನೂರು ಕ್ಯಾನ್ಸರ್ ರೋಗ ಹರಡುವಿಕೆ, ತಡೆಗಟ್ಟುವಿಕೆ ಇವುಗಳ ಬಗ್ಗೆ ಉಪಯುಕ್ತ ಮಾಹಿತಿ ನೀಡಿದರು.
ಶಿಬಿರದಲ್ಲಿ ಜನರಲ್ ಮೆಡಿಸಿನ್, ಒರ್ಥೋಪೆಡಿಸಿಯನ್, ಎಂಟ್, ಕಾರ್ಡಿಯಾಲಜಿ, ಒಬಿಜಿ, ಒಂಕೊಲಜಿ ಬಗ್ಗೆ ಪರೀಕ್ಷಿಸಿ ಔಷಧಿಗಳನ್ನು ಹಾಗೂ ಸಲಹೆಗಳನ್ನು ನೀಡಲಾಯಿತು.
ಶಿಬಿರದಲ್ಲಿ ಜಿಎಚ್ಎಂ ಅವರಿಂದ ಐವರು ಅರ್ಹ ಬಡವರಿಗೆ ಮಾಸಿಕ ರೇಶನ್ ವಿತರಿಸಲಾಯಿತು. ಜಿಎಚ್ಎಂ ಕಾರ್ಯದರ್ಶಿ ಸಜೀವುದ್ದೀನ್ ಎಂ.ಎಸ್. ಕಾರ್ಯಕ್ರಮ ನಿರ್ವಹಿಸಿದ್ದರು. ಜೆ.ಎಫ್. ಕೋಶಾಧಿಕಾರಿ ಮುಹಮ್ಮದ್ ಹನೀಫ್ ಸ್ವಾಗತಿಸಿದರು.