ಅಡ್ಡೂರು: ಟೈಫೈಡ್ ಹಾವಳಿ; ಹಲವರು ಆಸ್ಪತ್ರೆಗೆ ದಾಖಲು
ಮಂಗಳೂರು,ಫೆ.14: ಗುರುಪುರ ಗ್ರಾಪಂಗೊಳಪಟ್ಟ ಅಡ್ಡೂರಿನ ಕುಚುಗುಡ್ಡೆ ಎಂಬಲ್ಲಿ ಕಳೆದ ಹಲವು ದಿನಗಳಿಂದ ಟೈಫೈಡ್ ಹಾವಳಿ ಕಾಣಿಸಿಕೊಂಡಿದ್ದು, ಹಲವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಅಡ್ಡೂರಿನ ಕುಚುಗುಡ್ಡೆಯಲ್ಲಿ 40ಕ್ಕೂ ಅಧಿಕ ಮನೆಗಳಿದ್ದು, ಇಲ್ಲಿಯ ಜನರಿಗೆ ಕುಡಿಯಲು ಮತ್ತು ದಿನಬಳಕೆಗೆ ಆವಶ್ಯಕವಾದ ಶುದ್ದ ನೀರಿಲ್ಲದೆ ಜನರು ಪರದಾಡುವಂತಾಗಿದೆ. ನೀರಿನ ಟ್ಯಾಂಕ್ ಹದಗೆಟ್ಟಿದ್ದು, ಸೂಕ್ತ ಮಚ್ಚಳವಿಲ್ಲದ ಕಾರಣ ಇಲಿ ಸಹಿತ ಕ್ರಿಮಿಕೀಟಗಳು ಬಿದ್ದಿರುತ್ತದೆ. ಅಲ್ಲದೆ ಕಲುಷಿತ ನದಿ ನೀರನ್ನು ಫಿಲ್ಟರ್ ಅಳವಡಿಸದೆ ನೇರವಾಗಿ ಟ್ಯಾಂಕ್ಗೆ ಹಾಯಿಸುವುದರಿಂದ ಸಾಂಕ್ರಾಮಿಕ ರೋಗ ಹರಡಲು ಕಾರಣವೆಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.
ಈ ಬಗ್ಗೆ ಹಲವು ಬಾರಿ ಗ್ರಾಪಂ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ಕೂಡ ಪ್ರಯೋಜನವಾಗಿಲ್ಲ. ಈಗಾಗಲೆ ಇಲ್ಲಿಗೆ ಜಿಲ್ಲಾ ವೈದ್ಯಾಧಿಕಾರಿಗಳು ಭೇಟಿ ನೀಡಿ ಬಾವಿ ಮತ್ತು ಟ್ಯಾಂಕನ್ನು ಸ್ವಚ್ಚಗೊಳಿಸಬೇಕು, ಎತ್ತರಿಸಿ ಕಟ್ಟಬೇಕು, ಮುಚ್ಚಳ ಅಳವಡಿಸಬೇಕು, ನದಿ ನೀರನ್ನು ಫಿಲ್ಟರ್ ಮಾಡಿ ಸರಬರಾಜು ಮಾಡಬೇಕು ಎಂದು ಸೂಚಿಸಿದ್ದರೂ ಪ್ರಯೋಜನವಾಗಿಲ್ಲ.
ಎಸ್ಡಿಪಿಐ ನಿಯೋಗ ಭೇಟಿ: ಸಾಂಕ್ರಾಮಿಕ ರೋಗಕ್ಕೆ ತುತ್ತಾಗಿರುವ ಸ್ಥಳಕ್ಕೆ ಎಸ್ಡಿಪಿಐ ಅಡ್ಡೂರು ಘಟಕವು ಭೇಟಿ ನೀಡಿ ಸಾರ್ವಜನಿಕರ ಅಹವಾಲು ಆಲಿಸಿದೆ. ಈ ಸಂದರ್ಭ ಎಸ್ಡಿಪಿಐ ಅಡ್ಡೂರು ಘಟಕದ ಅಧ್ಯಕ್ಷ ಎ.ಕೆ. ಮುಸ್ತಫಾ, ಎ.ಕೆ.ಶಫೀಕ್, ಹಕೀಂ ಪಾಂಡೆಲ್, ಎ.ಕೆ. ಹನೀಫ್, ಎ.ಕೆ. ಜಬ್ಬಾರ್ ಶರೀಫ್ ಗೋಳಿಪಡ್ಪುಮತ್ತಿತರರಿದ್ದರು.