ಪೊಲೀಸ್ ಬಂಧನ ಭೀತಿಯಿಂದ ಆತ್ಮಹತ್ಯೆಗೆ ಯತ್ನಿಸಿದ ದಂಪತಿ
ಕೋಟ, ಫೆ.14: ಬಂಧನದ ಭೀತಿಯಿಂದ ಆರೋಪಿಯೊಬ್ಬ ಪೊಲೀಸ್ ಕರ್ತವ್ಯಕ್ಕೆ ಅಡ್ಡಿ ಪಡಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಕೋಟ ಸಮೀಪದ ಕೋಟ ಚಿತ್ರಪಾಡಿ ಎಂಬಲ್ಲಿ ಫೆ.13ರಂದು ಸಂಜೆ 7.30ರ ಸುಮಾರಿಗೆ ನಡೆದಿದೆ.
ನ್ಯಾಯಾಲಯಕ್ಕೆ ಹಾಜರಾಗದೆ ದಸ್ತಗಿರಿ ವಾರೆಂಟ್ ಜಾರಿಯಾಗಿದ್ದ ಶೃಂಗೇರಿ ಪೊಲೀಸ್ ಠಾಣೆಯ ಆರೋಪಿ ಚಿತ್ರಪಾಡಿ ಗ್ರಾಮದ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಪ್ರಕಾಶ್ ಎಂಬಾತನನ್ನು ಬಂಧಿಸಲು ಫೆ.13ರಂದು ಶೃಂಗೇರಿ ಪೊಲೀಸ್ ಸಿಬ್ಬಂದಿಗಳಾದ ನಾಗಪ್ಪ ತುಕ್ಕಣ್ಣನವರ್ ಮತ್ತು ಪ್ರವೀಣ್ ನಲವಾಗಲ್ ಎಂಬವರು ಕೋಟ ಪೊಲೀಸರ ಜೊತೆಗೆ ಚಿತ್ರಪಾಡಿಗೆ ಬೆಳಗ್ಗೆ ಬಂದಿದ್ದರು. ಅಲ್ಲಿ ಆರೋಪಿಯ ಪತ್ನಿ ಸುಪ್ರಿಯಾ ಮತ್ತು ತಾಯಿ ಪಾರ್ವತಮ್ಮ ಆರೋಪಿಯನ್ನು ಬಂಧಿಸಲು ಅವಕಾಶ ನೀಡಲಿಲ್ಲ.
ಈ ಹಿನ್ನೆಲೆಯಲ್ಲಿ ಶೃಂಗೇರಿ ಎಸ್ಸೈ ಎಚ್.ಎಂ.ಜಗನ್ನಾಥ್ ಸಂಜೆ ವೇಳೆ ಸ್ಥಳಕ್ಕೆ ಬಂದಿದ್ದು, ಆರೋಪಿಯ ಪತ್ನಿ ಮತ್ತು ತಾಯಿ ಮನೆಯ ಬಾಗಿಲು ತೆಗೆಯದೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರೆಂದು ದೂರಲಾಗಿದೆ. ಈ ವೇಳೆ ಬಂಧನ ಭೀತಿಯಿಂದ ಮನೆಯೊಳಗೆ ಪ್ರಕಾಶ ಹಾಗೂ ಆತನ ಪತ್ನಿ ಸುಪ್ರೀಯ ಆತ್ಮಹತ್ಯೆಗೆ ಯತ್ನಿಸಿದ್ದು, ಕೂಡಲೇ ಅವರಿಬ್ಬರನ್ನು ಬ್ರಹ್ಮಾವರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಶೃಂಗೇರಿ ಎಸ್ಸೈ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.