ಇಂದಿರಾ ಗಾಂಧಿ, ಶಾಸ್ತ್ರಿಯಂತೆ ಮೋದಿಯೂ ದಿಟ್ಟ ಉತ್ತರ ನೀಡಲಿ: ನಟ ಅನಂತ್ನಾಗ್
ಪುಲ್ವಾಮ ಭಯೋತ್ಪಾದಕ ದಾಳಿ
ಮಂಗಳೂರು, ಫೆ.16: ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಭದ್ರತಾ ಪಡೆಗಳ ಮೇಲೆ ನಡೆದ ಆತ್ಮಹತ್ಯಾ ದಾಳಿ ಭೀಕರ ಘಟನೆಯಾಗಿದ್ದು, ಇದು ಜನರ ಮನಸ್ಸನ್ನು ಅಲ್ಲೋಲ ಕಲ್ಲೋಲವನ್ನಾಗಿಸಿದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ದಿಟ್ಟ ಪ್ರತಿಕ್ರಿಯೆಯನ್ನು ಜನತೆ ನಿರೀಕ್ಷಿಸುತ್ತಿದ್ದಾರೆ ಎಂದು ಸ್ಯಾಂಡಲ್ವುಡ್ನ ಖ್ಯಾತ ನಟ ಅನಂತ್ನಾಗ್ ಹೇಳಿದ್ದಾರೆ.
‘ಇಂಗ್ಲಿಷ್’ ತುಳು ಚಿತ್ರದಲ್ಲಿ ಪಾತ್ರ ನಿರ್ವಹಿಸುತ್ತಿರುವ ಅವರು ಇಂದು ಶೂಟಿಂಗ್ಗಾಗಿ ಮಂಗಳೂರಿಗೆ ಭೇಟಿ ನೀಡಿದ್ದ ವೇಳೆ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಈ ಪ್ರತಿಕ್ರಿಯೆ ನೀಡಿದರು.
1947ರಲ್ಲಿ ಧರ್ಮದ ಆಧಾರದಲ್ಲಿ ಭಾರತ ವಿಭಜನೆಯಾದ ಬಳಿಕವೂ ಇಂತಹ ಘಟನೆಗಳು ಮುಂದುವರಿದಿದೆ. 1955ರಲ್ಲಿ ಲಾಲ್ ಬಹಾದ್ದೂರ್ ಶಾಸ್ತ್ರಿಯವರು, 1971ರಲ್ಲಿ ಇಂದಿರಾ ಗಾಂಧಿಯವರು ಪ್ರಧಾನಿಯಾಗಿದ್ದುಕೊಂಡು ಅದಕ್ಕೆ ತಕ್ಕ ಉತ್ತರ ನೀಡಿದ್ದರು. ಈಗ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಮತ್ತೊಂದು ಇತಿಹಾಸ ಸೃಷ್ಟಿಯಾಗಬೇಕಿದೆ. ವಿವಾದಿತ ಪ್ರದೇಶವನ್ನು ಸಂಪೂರ್ಣವಾಗಿ ಸೇನೆಯ ಸುಪರ್ದಿಗೆ ವಹಿಸುವ ಅಗತ್ಯವಿದ್ದು, ಅಲ್ಲಿ ಸೇನೆಯವರ ಮೇಲೆ ಕಲ್ಲು ತೂರಾಟ ಮಾಡುವವರನ್ನು ಬೆಂಬಲಿಸುವ ಕಾರ್ಯ ನಿಲ್ಲಬೇಕಿದೆ. ಯೋಧರನ್ನು ಅನ್ಯಾಯವಾಗಿ ಸಾಯಲು ಬಿಡುವ ಬದಲು ಶಾಶ್ವತ ಪರಿಹಾರವನ್ನು ಕಂಡುಕೊಳ್ಳುವುದು ಅತೀ ಅಗತ್ಯ ಎಂದು ಅನಂತ್ನಾಗ್ ಹೇಳಿದರು.