ಮಕ್ಕಳಿಗಾಗಿ ಗುಣಮಟ್ಟದ ಸಮಯ ಮೀಸಲಿಡಿ: ಎಡಿಸಿ ವಿದ್ಯಾಕುಮಾರಿ
ಉಡುಪಿ, ಫೆ.16: ಇಂದು ಅವಿಭಕ್ತ ಕುಟುಂಬಗಳು ದೂರವಾಗಿ ವಿಭಕ್ತ ಕುಟುಂಬಗಳು ಹೆಚ್ಚಾಗುತ್ತಿವೆ. ಇಲ್ಲಿ ಕೆಲಸದಲ್ಲಿ ತೊಡಗಿರುವ ತಂದೆ ತಾಯಿ ಒತ್ತಡದ ಜೀವನ ಸಾಗಿಸುವ ಮೂಲಕ ತಮ್ಮ ಮಕ್ಕಳಿಗೆ ಸಮಯ ಕೊಡಲು ಸಾಧ್ಯವಾಗುತ್ತಿಲ್ಲ. ಇದರಿಂದ ಮಕ್ಕಳು ಕೆಟ್ಟ ಚಟಗಳಿಗೆ ಬಲಿಯಾಗುತ್ತಾರೆ. ಆದುದರಿಂದ ಮಕ್ಕಳಿಗೆ ಗುಣಮಟ್ಟದ ಸಮಯ ಮೀಸಲಿಡುವ ಕಾರ್ಯ ಪೋಷಕರು ಮಾಡಬೇಕು ಎಂದು ಉಡುಪಿ ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ಹೇಳಿದ್ದಾರೆ.
ಉಡುಪಿ ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆಯ ಮನೋವೈದ್ಯ ಡಾ. ವಿರೂಪಾಕ್ಷ ದೇವರುಮನೆ ಅವರ ‘ನೀನು ಒಂಟಿಯಲ್ಲ’ ಪುಸ್ತಕವನ್ನು ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಶನಿವಾರ ಬಿಡುಗಡೆ ಗೊಳಿಸಿ ಅವರು ಮಾತನಾಡುತಿದ್ದರು.
ಮಕ್ಕಳಿಂದ ತಂದೆ ತಾಯಿ ಪ್ರೀತಿಯಿಂದ ವಿಮುಖರಾಗಿ ಒಬ್ಬಂಟಿಯಾಗಿ ಬದುಕುವಂತಾಗಿದೆ. ಇದರ ಪರಿಣಾಮ ಇಂತಹ ಮಕ್ಕಳಿಗೆ ಮುಂದೆ ಸಮಾಜ ವನ್ನು ಎದುರಿಸುವ ಶಕ್ತಿಯೇ ಇರುವುದಿಲ್ಲ. ಹಾಗಾಗಿ ಇದು ಈಗ ಸಾಮಾಜಿಕ ಸಮಸ್ಯೆಯಾಗಿ ಪರಿಣಮಿಸುತ್ತಿದೆ ಎಂದು ಅವರು ತಿಳಿಸಿದರು.
ಮದ್ಯವ್ಯಸನಿಗಳ ಮಕ್ಕಳು ಒಂಟಿತನಕ್ಕೆ ಒಳಗಾಗಿ ಹಲವು ಸಮಸ್ಯೆಗಳಲ್ಲಿ ಸಿಲುಕಿಕೊಳ್ಳುತ್ತಾರೆ. ಮುಂದೆ ಆ ಮಕ್ಕಳು ಕೂಡ ಅದೇ ವ್ಯಸನಕ್ಕೆ ಬಲಿಯಾಗು ತ್ತಾರೆ. ಮೊದಲು ಕುತೂಹಲ ಹಾಗೂ ಮೋಜಿಗಾಗಿ ಆರಂಭಿಸುವ ಕುಡಿತ, ಮುಂದೆ ವ್ಯಸನವಾದಾಗ ಅದರ ಸಮಸ್ಯೆಗಳ ಬಗ್ಗೆ ಅರಿವಾಗುತ್ತದೆ. ಇದು ತಮ್ಮ ಕುಟುಂಬ ಹಾಗೂ ಮಕ್ಕಳ ಮೇಲೆ ಬಹಳಷ್ಟು ಪರಿಣಾಮ ಬೀರುತ್ತದೆ ಎಂದರು.
ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ್ ಕಾಮತ್, ಉಡುಪಿ ಡಾ. ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆಯ ನಿರ್ದೇಶಕ ಡಾ.ಪಿ.ವಿ.ಭಂಡಾರಿ, ಬೆಂಗಳೂರು ಸಾವಣ್ಣ ಪ್ರಕಾಶನದ ಜಮೀಲ್, ಡಾ.ವೀಣಾ ಉಪಸ್ಥಿತರಿದ್ದರು.
ಡಾ.ವಿರೂಪಾಕ್ಷ ದೇವರುಮನೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಾಳಿಗಾ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಸೌಜನ್ಯ ಶೆಟ್ಟಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಮದ್ಯವಸನಿಗಳ ಮಕ್ಕಳ ಕುರಿತ ವಿಡಿಯೋ ಹಾಗೂ ಕಿರುಚಿತ್ರಗಳ ಪ್ರದರ್ಶನ ನಡೆಯಿತು.