ಮಂಗಳೂರಿನ ಮೀನು ಖಾದ್ಯವೆಂದರೆ ಬಲು ಇಷ್ಟ: ಪುನೀತ್ ರಾಜ್ಕುಮಾರ್
ಸುಚಿತ್ರಾ ಚಿತ್ರಮಂದಿರಕ್ಕೆ ಭೇಟಿ ನೀಡಿದ ನಟ
ಮಂಗಳೂರು, ಫೆ.17: ಮಂಗಳೂರಿನ ಜನರ ನಡಾವಳಿಕೆ ಇಷ್ಟವಾಗುತ್ತದೆ; ಅವರದು ನೇರ, ಸ್ಪಷ್ಟ ಪದಗಳ ಮಾತಿನವರು. ಜೊತೆಗೆ ಮಂಗಳೂರಿನ ಮೀನಿನ ಖಾದ್ಯ ಬಲು ರುಚಿಯಿಂದ ಕೂಡಿದ್ದು, ನನಗೆ ಅಚ್ಚುಮೆಚ್ಚು ಎಂದು ಕನ್ನಡ ಚಿತ್ರರಂಗದ ನಟ ಪುನೀತ್ ರಾಜ್ಕುಮಾರ್ ಹೇಳಿದರು.
ನಗರದ ಸುಚಿತ್ರಾ ಚಿತ್ರಮಂದಿರಕ್ಕೆ ಭೇಟಿ ನೀಡಿ ಅಭಿಮಾನಿಗಳೊಂದಿಗೆ ‘ನಟಸಾರ್ವಭೌಮ’ ಚಿತ್ರ ವೀಕ್ಷಿಸಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಮಂಗಳೂರಿನಲ್ಲಿ ಕನ್ನಡ ಚಲನಚಿತ್ರಗಳಿಗೆ ಒಳ್ಳೆಯ ಪ್ರತಿಕ್ರಿಯೆಯಿದೆ. ಮಂಗಳೂರಿಗೆ ನಾನು ಬರುತ್ತಿರುವುದು ಇದು ಮೊದಲೇನಲ್ಲ. ಚಿಕ್ಕವನಿದ್ದಾಗ ನನ್ನ ತಂದೆಯೊಂದಿಗೆ ಆಗಾಗ ಬರುತ್ತಿದ್ದೆ ಎಂದು ಹಳೆಯ ನೆನಪುಗಳನ್ನು ನೆನಪಿಸಿಕೊಂಡರು.
ಸೆಲ್ಫಿಗೆ ಮುಗಿಬಿದ್ದ ಅಭಿಮಾನಿಗಳು: ನಟ ಪುನೀತ್ ರಾಜ್ಕುಮಾರ್ ಮಂಗಳೂರಿನ ಚಿತ್ರಮಂದಿರವೊಂದಕ್ಕೆ ಭೇಟಿ ನೀಡಲಿದ್ದಾರೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಹಲವಾರು ಅಭಿಮಾನಿಗಳು ಚಿತ್ರಮಂದಿರಕ್ಕೆ ಬಂದು ಸಿನೆಮಾ ವೀಕ್ಷಿಸಿದರು. ಈ ವೇಳೆ ಪುನೀತ್ ಜೊತೆ ಅಭಿಮಾನಿಗಳು ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದರು.