ಭಯೋತ್ಪಾದನೆಯ ವಿರುದ್ಧ ಜಿಹಾದ್ ನಡೆಸೋಣ: ನೂರುದ್ದೀನ್ ಸ್ವಲಾಹಿ
ಮಂಗಳೂರು, ಫೆ. 18: ಕೆಎಸ್ಎ ಸ್ಟೂಡೆಂಟ್ಸ್ ವಿಂಗ್ ಮಂಗಳೂರು ಹಮ್ಮಿಕೊಂಡಿದ್ದ ಪ್ರಿ - ಪ್ರೊಫ್ಕೋನ್ ಕಾರ್ಯಕ್ರಮವು ಪಾಂಡೇಶ್ವರದ ಮನ್ಹಜ್-ಅಲ್ ಅಂಬಿಯಾ ಅರೆಬಿಕ್ ಅಕಾಡಮಿಯ ಸಭಾಂಗಣದಲ್ಲಿ ರವಿವಾರ ಸಂಜೆ ನಡೆಯಿತು.
ಈ ಸಂದರ್ಭ ಮಾತನಾಡಿದ ನೂರುದ್ದೀನ್ ಸ್ವಲಾಹಿ ಪುಲ್ವಾಮದಲ್ಲಿ ನಡೆದ ಭಯೋತ್ಪಾದನ ದಾಳಿಯನ್ನು ಖಂಡಿಸಿ, ಪ್ರವಾದಿ ಮುಹಮ್ಮದ್ (ಸ.ಅ)ರವರ ಜೀವನ ಸಂದೇಶ ಮತ್ತು ಕುರ್ ಆನಿನ ಸಂದೇಶಗಳು ಭಯೋತ್ಪಾದನೆಗೆ ವಿರುದ್ಧವಾಗಿದೆ. ಒಬ್ಬರನ್ನು ಕೊಂದರೆ ಸಕಲ ಮನುಷ್ಯರನ್ನು ಕೊಲ್ಲುವುದಕ್ಕೆ ಸಮಾನವಾಗಿದೆ ಎಂದು ಕರೆ ನೀಡಿದ ಕುರ್ ಆನಿನ ನೈಜ ಅನುಯಾಯಿ ಯಾವತ್ತೂ ಬಾಂಬ್ ಸ್ಫೋಟಿಸಲಾರ, ಸಕಲರೊಂದಿಗೂ ಉತ್ತಮ ಬಾಂಧವ್ಯದೊಂದಿಗೆ ಬದುಕಬೇಕು ಎಂದು ತಿಳಿಸಿದರು.
ಮಾ. 8,9,10 ರಂದು ಕೇರಳದ ಪೆರಿಂದಲ್ಮನ್ನದಲ್ಲಿ ನಡೆಯಲಿರುವ ಪ್ರೊಫೆಷನಲ್ ಸ್ಟೂಡೆಂಟ್ಸ್ ಕಾನ್ಫರೆನ್ಸ್ ಭಾಗವಹಿಸಲು ಯಾಸಿರ್ ಬಿನ್ ಮುಹಮ್ಮದ್ ಕರೆ ನೀಡಿದರು.
ಮುಖ್ಯ ಅತಿಥಿಯಾಗಿ ಶೇಖ್ ಅರ್ಷದ್ ಖಾನ್, ಕರ್ನಾಟಕ ಸಲಫಿ ಅಸೋಸಿಯೇಷನ್ ಅಧ್ಯಕ್ಷ ಇಂಜಿನಿಯರ್ ಅಬ್ದುರ್ರಶೀದ್ ಮಂಗಳೂರು, ಸ್ಟೂಡೆಂಟ್ಸ್ ವಿಂಗ್ ಇದರ ಅಧ್ಯಕ್ಷ ಸೈಯದ್ ಶಾಝ್ ಉಪಸ್ಥಿತರಿದ್ದರು.
ಮಾಸ್ಟರ್ ಉಮರ್ ಕಿರಾಅತ್ ಪಠಿಸಿದರು, ಕಾರ್ಯಕ್ರಮದಲ್ಲಿ ಮುಹಮ್ಮದ್ ಅಪ್ತಾಬ್ ಸ್ವಾಗತಿಸಿ, ಮುಹಮ್ಮದ್ ಈಸಾ ವಂದಿಸಿದರು.