ಪಡುಬಿದ್ರಿ: ಮಾನವ ಸರಪಳಿ ಮೂಲಕ ವೀರ ಯೋಧರಿಗೆ ಶ್ರದ್ಧಾಂಜಲಿ
ಪಡುಬಿದ್ರಿ, ಫೆ. 18: ಕಾಶ್ಮೀರದ ಪುಲ್ವಾಮದಲ್ಲಿ ಉಗ್ರರಿಂದ ದಾರುಣವಾಗಿ ಹತ್ಯೆಗೀಡಾದ ದೇಶದ ಧೀರ ಯೋಧರರಿಗೆ ಮಾನವ ಸರಪಳಿ ನಿರ್ಮಿಸಿ ಶ್ರದ್ಧಾಂಜಲಿ ಅರ್ಪಿಸುವ ಕಾರ್ಯಕ್ರಮ ಹೆಜಮಾಡಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶಾಲಾ ವಿದ್ಯಾರ್ಥಿಗಳಿಂದ ಹಾಗೂ ಹಳೇ ವಿದ್ಯಾರ್ಥಿ ಸಂಘದ ವತಿಯಿಂದ ಸೋಮವಾರ ನಡೆಯಿತು.
ಕಾಲೇಜಿನ ಹಳೇ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ರವೀಂದ್ರನಾಥ ಜಿ.ಹೆಗ್ಡೆ, ಅಧ್ಯಕ್ಷ ಸುಧೀರ್ ಎಸ್.ಕರ್ಕೇರ, ಉಪಾಧ್ಯಕ್ಷ ಅಬ್ದುಲ್ ಖಾದರ್ ಮತ್ತು ಅಬ್ದುಲ್ ರೆಹಮಾನ್, ಜಿಲ್ಲಾ ಪಂಚಾಯಿತಿ ಸದಸ್ಯ ಶಶಿಕಾಂತ್ ಪಡುಬಿದ್ರಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿಶಾಲಾಕ್ಷಿ ಪುತ್ರನ್, ಉಪಾಧ್ಯಕ್ಷ ಸುಧಾಕರ ಕರ್ಕೇರ, ಪಿಡಿಒ ಮಮತಾ ವೈ.ಶೆಟ್ಟಿ, ಕಾಲೇಜು ಪ್ರಾಂಶುಪಾಲ ಈಶ್ವರ್ ಕೆ., ಶೇಖರ್ ಹೆಜ್ಮಾಡಿ, ರವೀಂದ್ರ ಹೆಜ್ಮಾಡಿ, ಪಾಂಡುರಂಗ ಕರ್ಕೇರ, ಕೇಶವ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭ ಮಡಿದ ವೀರ ಯೋಧರ ಭಾವಚಿತ್ರಕ್ಕೆ ಪುಷ್ಪ ನಮನದೊಂದಿಗೆ ಕ್ಯಾಂಡಲ್ ಹಚ್ಚಿ ಶ್ರದ್ಧಾಂಜಲಿ ಅರ್ಪಿಸಲಾಯಿತು. ಬಳಿಕ ವಿದ್ಯಾರ್ಥಿಗಳು, ಅಧ್ಯಾಪಕರು, ಹಳೇ ವಿದ್ಯಾರ್ಥಿಗಳು ಮಾನವ ಸರಪಳಿ ರಚಿಸಿ ಮೌನ ಪ್ರಾರ್ಥನೆ ಸಲ್ಲಿಸಿದರು.
ಹೈಸ್ಕೂಲು ಮುಖ್ಯೋಪಾಧ್ಯಾಯಿನಿ ಸವಿತಾ ಸ್ವಾಗತಿಸಿದರು. ಶೇಖರ್ ಹೆಜ್ಮಾಡಿ ಪ್ರಸ್ತಾವಿಸಿದರು.ದೀಪಾ ಉಡುಪ ವಂದಿಸಿದರು.