ಕಾಪು: ವಿದ್ಯುತ್ ಆಘಾತ; ಕಾರ್ಮಿಕ ಸಾವು
ಕಾಪು, ಫೆ. 27: ಸಿಗಡಿ ಮೀನು ಕೃಷಿ ಘಟಕದಲ್ಲಿ ವಿದ್ಯುತ್ ಆಘಾತದಿಂದ ನೇಪಾಲ ಮೂಲದ ಕಾರ್ಮಿಕನೋರ್ವ ಸಾವನ್ನಪ್ಪಿದ ಘಟನೆ ಬುಧವಾರ ಸಂಜೆ ನಡೆದಿದೆ.
ಈತ ಉಳಿಯಾರಗೋಳಿ ಗ್ರಾಮದ ಕೈಪುಂಜಾಲಿನ ಚಟ್ಲಿ ಕೆರೆ ಎಂಬಲ್ಲಿ ಸಿಗಡಿ ಮೀನು ಕೃಷಿ ಘಟಕದಲ್ಲಿ ಕಾರ್ಮಿಕನಾಗಿ ದುಡಿಯುತ್ತಿದ್ದ ನೇಪಾಳ ಮೂಲದ ಪತ್ತು ಸಾಹ್ನಿ (22) ಎಂದು ಗುರುತಿಸಲಾಗಿದೆ.
ರಾಮ ಪೂಜಾರಿ ಎಂಬವರ ಮಾಲಕತ್ವದ, ಸುಧೀರ್ ಎಂಬವರ ನಿರ್ವಹಣೆಯಲ್ಲಿದ್ದ ಈ ಘಟಕದಲ್ಲಿ ಪತ್ತು ಸಾಹ್ನಿ ಕಳೆದ ವಾರವಷ್ಟೆ ಕೆಲಸಕ್ಕೆ ಸೇರಿಕೊಂಡಿದ್ದ. ಬುಧವಾರ ಮಧ್ಯಾಹ್ನ ಸಿಗಡಿ ಕೆರೆಯ ಬಳಿ ಇತರ ಇಬ್ಬರೊಂದಿಗೆ ಕೆಲಸ ಮಾಡುತ್ತಿದ್ದು, ಕೆರೆಗೆ ನೀರು ಹಾಯಿಸಲು ಬಂದಾಗ ಸಂಭವಿಸಿದ ದುರ್ಘಟನೆಯಲ್ಲಿ ವಿದ್ಯುತ್ ಆಘಾತಕ್ಕೊಳಗಾಗಿ ಮೃತಪಟ್ಟಿರಬೇಕೆಂದು ಸಂಶಯಿಸಲಾಗಿದೆ.
ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story